ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್‌ಮಹಲ್‌ ಸನ್ನಿಧಿಯಲ್ಲಿ ಹೊಸ ಇತಿಹಾಸ ಶುರುವಾಗುತ್ತದಾ?

By Staff
|
Google Oneindia Kannada News

ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ಅಣ್ಣ ತಮ್ಮರಂತೆ ಬಾಳುವುದೇನೂ ಬೇಡ. ಕನಿಷ್ಠ- ಒಬ್ಬರ ಹೆಸರೆತ್ತಿದರೆ ಮತ್ತೊಬ್ಬರು ಹೆಡೆಯೆತ್ತದಷ್ಟು ಮಟ್ಟಿಗಾದರೂ ಸೌಹಾರ್ದಯುತವಾಗಿ ಬಾಳಲಿಕ್ಕೆ ಸಾಧ್ಯವಿಲ್ಲವಾ? ಅಂತದೊಂದು ಪರಿಸ್ಥಿತಿಯನ್ನು ವಾಜಪೇಯಿ ಹಾಗೂ ಮುಷರ್ರಫ್‌ ಸೃಷ್ಟಿಸುತ್ತಾರಾ?

ಸದ್ಯದ ಪರಿಸ್ಥಿತಿ ಹಾಗೂ ನಾಯಕರುಗಳ ಹೇಳಿಕೆಗಳನ್ನು ಗಮನಿಸಿದರೆ, ಆಗ್ರಾ ಶೃಂಗಸಭೆಯಿಂದ ನಿರೀಕ್ಷಿಸುವಂತದ್ದೇನೂ ಇಲ್ಲ . ಇದೂ ಕೂಡ ಈ ಮುನ್ನಿನ ಸಿಮ್ಲಾ ಒಪ್ಪಂದ- ಲಾಹೋರ್‌ ಘೋಷಣೆಗಳ ರೀತಿ ಪ್ರಚಾರ ಗಿಟ್ಟಿಸಿ ಆನಂತರ ಕಸದ ಬುಟ್ಟಿಗೆ ಸೇರುವುದು ಖಚಿತ ಎನ್ನುತ್ತಿದ್ದಾರೆ ನಮ್ಮ ರಾಜಕೀಯ ಪರಿಣತರು.

ಅವರಿವರ ಮಾತುಗಳು ಒತ್ತಟ್ಟಿಗಿರಲಿ, ಸಾಕ್ಷಾಕ್‌ ನಮ್ಮ ವಿದೇಶಾಂಗ ಹಾಗೂ ಗೃಹ ಸಚಿವರು ಆಗ್ರಾ ಶೃಂಗ ಸಭೆಯಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಬೇಡಿ ಎಂದು ಅಪ್ಪಣೆ ಕೊಡಿಸಿದ್ದಾರೆ. ಅವರ ಮಾತುಗಳು ನಿಜವಾದರೆ- ಈ ಮಾತುಕತೆ, ಮುಷರ್ರಫ್‌ಗೆ ರಾಜಾತಿಥ್ಯ ಇದೆಲ್ಲಾ ಯಾಕೆ? ಇಂಥ ಪ್ರಶ್ನೆಗಳಿಗೆ ಯಾವತ್ತೂ ಉತ್ತರಗಳು ಸ್ಪಷ್ಟವಾಗಿರುವುದಿಲ್ಲ . ಮನಸ್ಸಿನಲ್ಲಿ ವೈರ ತುಂಬಿಕೊಂಡಿದ್ದರೂ ಮನೆಗೆ ಬಂದಾಗ ಮಣೆ ಹಾಕುವ ಸಂಪ್ರದಾಯವನ್ನು ಭಾರತೀಯರು ಯಾವತ್ತೂ ಮೀರಿದ್ದಿಲ್ಲ . ಕಡೆಯ ಪಕ್ಷ ಅದರ ಔಚಿತ್ಯವನ್ನು ಪ್ರಶ್ನಿಸುವುದು ಕೂಡ ಅವರ ಮಟ್ಟಿಗೆ ಅಪರಾಧವೇ. ಅತಿಥಿ ದೇವೋಭವ!

ನಾವು ಮುಷರ್ರಫ್‌ ಅವರನ್ನು ನಂಬಬಹುದಾ ?
ಮುಷರ್ರಫ್‌ ಅವರೊಂದಿಗಿನ ಶೃಂಗಸಭೆಯ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ ಎನ್ನುತ್ತಾರೆ ವಾಜಪೇಯಿ. ನನ್ನ ಭಾರತ ಭೇಟಿ ಇತಿಹಾಸವನ್ನು ಸೃಷ್ಟಿಸುತ್ತದೆ ಎನ್ನುತ್ತಾರೆ ಮುಷರ್ರಫ್‌. ಆದರೆ, ಇತಿಹಾಸ ಹೇಳುವುದೇ ಬೇರೆ. ಭಾರತದ ಮಟ್ಟಿಗಂತೂ ಮುಷರ್ರಫ್‌ ಕಾರ್ಗಿಲ್‌ ಕದನವನ್ನು ಸೃಷ್ಟಿಸಿದ ಖಳ.

1999 ರಲ್ಲಿ ಭಾರತದ ಪ್ರಧಾನಿ ವಾಜಪೇಯಿ ನವದೆಹಲಿಯಿಂದ ಲಾಹೋರ್‌ಗೆ ಬಸ್‌ನಲ್ಲಿ ತೆರಳಿ ಶಾಂತಿಯ ಹೊಸದೊಂದು ಅಧ್ಯಾಯವನ್ನು ಪ್ರಾರಂಭಿಸಲು ಪ್ರಯತ್ನಿಸಿದ ಬೆನ್ನಿಗೇ ಕಾರ್ಗಿಲ್‌ನಲ್ಲಿ ಕಾಲು ಕೆರೆದದ್ದು ಇದೇ ಮುಷರ್ರಫ್‌. ಲಾಹೋರ್‌ಗೆ ವಾಜಪೇಯಿ ತೆರಳಿದಾಗ ಸೈನ್ಯದ ಸರ್ವಾಧಿಕಾರಿಯಾಗಿದ್ದವರು ಮುಷರ್ರಫ್‌. ಅಸಮಾಧಾನದಿಂದ ಕುದಿಯುತ್ತಿದ್ದ ಅವರು, ಭಾರತದ ಪ್ರಧಾನಿಯ ಕೈ ಕುಲುಕಲೂ ಇಷ್ಟ ಪಡಲಿಲ್ಲ . ಇಂತಹ ಮನುಷ್ಯ ಒಂದೆಡೆ ಇತಿಹಾಸ ಬರೆಯುತ್ತೇನೆ ಎಂದು ಹೇಳುತ್ತಾರೆ. ಮತ್ತೊಂದೆಡೆ ಶಿಮ್ಲಾ ಒಪ್ಪಂದ- ಲಾಹೋರ್‌ ಘೋಷಣೆಗಳಿಗೆ ಬೆಲೆಯಿಲ್ಲ ಅನ್ನುತ್ತಾರೆ. ಇಬ್ಬಂದಿಯ ಈ ಮನುಷ್ಯನಿಂದ ಏನನ್ನು ನಿರೀಕ್ಷಿಸುವುದು?!

ಹಲವು ಮುಖಗಳ ಮುಷರ್ರಫ್‌
ಮುಷರ್ರಫ್‌ ಜನ ಪ್ರತಿನಿಧಿಯಲ್ಲ ಅನ್ನುವುದನ್ನು ಕೂಡ ನೆನಪಿನಲ್ಲಿಡಬೇಕು. ಅವರು ಪಾಕಿಸ್ತಾನದ ಅಧ್ಯಕ್ಷರಾಗಿ ತಮ್ಮನ್ನು ತಾವೇ ಘೋಷಿಸಿಕೊಂಡಿದ್ದಾರೆ. ಆ ಕಾರಣದಿಂದಲೇ ಅವರಿಗೆ ಮಾತುಕತೆಯ ಸಂದರ್ಭದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಿಕ್ಕೆ ಅಧಿಕಾರವಿಲ್ಲ ಎಂದು ಪಾಕ್‌ನ ಮಾಜಿ ಪ್ರಧಾನಿ ಬೆನಜೀರ್‌ ಭುಟ್ಟೋ ಹೇಳುವುದನ್ನು ಸುಲಭಕ್ಕೆ ತಳ್ಳಿ ಹಾಕಲಾಗದು. ಇಷ್ಟು ಮಾತ್ರವಲ್ಲದೆ ಮುಷರ್ರಫ್‌ ಮಾತುಕತೆಯ ಕಾಲದಲ್ಲಿ ವ್ಯಕ್ತಿಶಃ ತಾವಾಗಿಯೇ ಉಳಿಯುತ್ತಾರೆಂದು ನಂಬುವಂತಿಲ್ಲ . ಮುಷರ್ರಫ್‌ ಕೇವಲ ಪಾಕ್‌ ಪ್ರತಿನಿಧಿಯಲ್ಲದೆ- ಪಾಕ್‌ ಸೇನೆಯ ಪ್ರತಿನಿಧಿ ಹಾಗೂ ಕಾಶ್ಮೀರ ಕೊಳ್ಳದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವವರ ಬೆಂಬಲಿಗ ಅನ್ನುವುದನ್ನೂ ಗಮನದಲ್ಲಿಡಬೇಕು.

ಮುಷರ್ರಫ್‌ ಒತ್ತಟ್ಟಿಗಿರಲಿ. ಅವರೇನೂ ಶಾಂತಿಯ ಮಾತುಕತೆಗಳಿಗಾಗಿ ಭಾರತಕ್ಕೆ ಬಂದ ಮೊದಲ ಪಾಕ್‌ ಪ್ರತಿನಿಧಿಯೇನೂ ಅಲ್ಲ . 1987 ರಲ್ಲೇ ಜಿಯಾ ಉಲ್‌ ಉಕ್‌ ಭಾರತಕ್ಕೆ ಬಂದು ಹೋಗಿದ್ದರು. ಆಗಲೂ ಇಂಥದ್ದೆ ಸಂಭ್ರಮ- ನಿರೀಕ್ಷೆಗಳು ಹುಟ್ಟಿದ್ದವು. ಆದರೆ, ಆದದ್ದೇನು ? ಅದೇ ರಕ್ತಪಾತ, ತೀರದ ದ್ವೇಷ..

ಈ ಎಲ್ಲದರ ನಡುವೆಯೂ-
ಮುಷರ್ರಫ್‌ರ ಭಾರತ ಭೇಟಿ ಆಶಾವಾದವನ್ನು ಪೂರ್ತಿಯಾಗಿ ಕಸಿದುಕೊಂಡಿಲ್ಲ . ಏನಾದರೂ ಸಾಧ್ಯವಾದೀತೇನೋ ನೋಡೋಣ ಅನ್ನುವ ಮಾತುಗಳು ಇನ್ನೂ ಕೇಳಿ ಬರುತ್ತೇವೆ. ಕಾಶ್ಮೀರ ಕೊಳ್ಳದ ಸಮಸ್ಯೆಯೂ ಸೇರಿದಂತೆ ಭಯೋತ್ಪಾದಕತೆ, ಮಾದಕ ದ್ರವ್ಯಗಳ ಕಳ್ಳ ಸಾಗಣೆ, ಉಭಯ ದೇಶಗಳ ಜನರ ನಡುವಣ ರಕ್ತ ಸಂಬಂಧಗಳು, ವಾಣಿಜ್ಯ ವ್ಯವಹಾರ ಮುಂತಾದ ವಿಷಯಗಳು ಶೃಂಗಸಭೆಯಲ್ಲಿ ಚರ್ಚೆಯಾಗಲಿವೆ. ಭಾರತ- ಪಾಕ್‌ ನಡುವೆ ವಾಣಿಜ್ಯ ಸಂಬಂಧ ಪ್ರಾರಂಭಗೊಳ್ಳುವ ಬಗ್ಗೆ ನಮ್ಮ ವಣಿಕ ವರ್ಗ ಕಾತರದಿಂದ ಕಾಯುತ್ತಿದೆ.

ಪ್ರೇಮ ಮಂದಿರ ತಾಜ್‌ಮಹಲ್‌ ತವರಲ್ಲಿ ವಾಜಪೇಯಿ- ಮುಷರ್ರಫ್‌ ಶಾಂತಿಯ ಪಾರಿವಾಳಗಳನ್ನು ಹಾರಿಸುತ್ತಾರಾ ಅನ್ನುವುದನ್ನು ವಿಶ್ವವೇ ಕಾತರದಿಂದ ಗಮನಿಸುತ್ತದೆ. ಅಲ್ಲಿನ ಪ್ರತಿಯಾಂದು ಕದಲಿಕೆಯೂ ಇತಿಹಾಸದಲ್ಲಿ ದಾಖಲಾಗುತ್ತದೆ ಅನ್ನುವುದು ಮುಷರ್ರಫ್‌ ಅವರಿಗೂ ಗೊತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X