ಅರಣ್ಯ ಇಲಾಖೆ ವೀಕ್ಷಣಾಗೋಪುರದಲ್ಲಿ 2 ದಿನ ಕಳೆದ ವೀರಪ್ಪನ್!
ಮೈಸೂರು : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಇಬ್ಬರು ಕೇಂದ್ರ ಸಚಿವರ ಬಂಧನದ ಸುದ್ದಿಯ ಅಬ್ಬರದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ಸದ್ದಿಲ್ಲದೆ ಅಡಗಿದ್ದ ವೀರಪ್ಪನ್ ಸಂಬಂಧಿ ಸುದ್ದಿಗಳು ಈಗ ಮತ್ತೆ ಗರಿಗೆದರಿವೆ.
ಇತ್ತೀಚಿನ ವರ್ತಮಾನಗಳ ರೀತ್ಯ ತಮಿಳುನಾಡಿನ ಕಾರ್ಯಪಡೆಯ ಮುಖ್ಯಸ್ಥ ವಾಲ್ಟರ್ ಥೇವಾರಂ ಕಾರ್ಯಾಚರಣೆಗೆ ಹೆದರಿರುವ ಕಾಡುಗಳ್ಳ ವೀರಪ್ಪನ್ ತನ್ನ ತಂಡದವರೊಂದಿಗೆ ಕರ್ನಾಟಕದ ಜೋಡಿಗೆರೆ ಕಾಡಿನ ಆಸುಪಾಸಿನಲ್ಲೇ ಬೀಡು ಬಿಟ್ಟಿದ್ದಾನೆ. ಕನ್ನಡ ದಿನಪತ್ರಿಕೆಯಾಂದರ ರೀತ್ಯ ವೀರಪ್ಪನ್ ತಂಡ, ಪುಣಜನೂರು ವ್ಯಾಪ್ತಿಯ ಜೋಡಿಗೆರೆ ಅರಣ್ಯ ಇಲಾಖೆಗೆ ಸೇರಿದ ವೀಕ್ಷಣಾ ಗೋಪುರದಲ್ಲೇ ಎರಡು ದಿನಗಳ ಕಾಲ ಆಶ್ರಯ ಪಡೆದು ನಂತರ ಹೊಸ ಅಡಗುತಾಣದತ್ತ ಪ್ರಯಾಣ ಬೆಳೆಸಿದೆ.
ಈ ವೀಕ್ಷಣಾ ಗೋಪುರದಲ್ಲಿ ತಂಡ ಅಡುಗೆ ಮಾಡಿರುವುದೂ ಕಂಡುಬಂದಿದೆ. ಸುಳಿವಿನ ಆಧಾರದ ಮೇಲೆ ಕಾಡುಗಳ್ಳನಿಗೆ ಕಾಡಿನಂಚಿನಿಂದ ಸರಬರಾಜಾಗುವ ಆಹಾರ ಸಾಮಗ್ರಿಗಳನ್ನು ತಡೆಯಲು ತೀವ್ರ ಪೊಲೀಸ್ ಕಾರ್ಯಾಚರಣೆ ಮಾಡಲಾಗುತ್ತಿದೆ. ವೀರಪ್ಪನ್ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿರುವ ಬುಡಕಟ್ಟು ಜನರ ಚಲನವಲನಗಳ ಮೇಲೂ ತೀವ್ರ ನಿಗಾ ಇಡಲಾಗಿದೆ.
ಪ್ರತಿದಾಳಿ : ತಮಿಳುನಾಡು ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಜಂಟಿ ಕಾರ್ಯಪಡೆ ಗಸ್ತು ತಿರುಗುತ್ತಿದೆ. ವೀರಪ್ಪನ್ ಪ್ರತಿದಾಳಿ ಮಾಡುವ ಶಂಕೆಯೂ ಇದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಡಿನಂಚಿನ ಗ್ರಾಮಸ್ಥರನ್ನು ವಿಚಾರಣೆ ಮಾಡುವ ಮೂಲಕ ವೀರಪ್ಪನ್ ಮತ್ತು ಸಹಚರರ ಅಡಗುತಾಣದ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.