ಅ.2 ರಿಂದ ಸಂಚಾರಿ ಅರಮನೆ ರೈಲಿನಲ್ಲಿಕರ್ನಾಟಕ ದರ್ಶನ ಭಾಗ್ಯ
ಬೆಂಗಳೂರು : ರಾಜಾಸ್ಥಾನ ಮಾದರಿಯ ‘ಅರಮನೆ ರೈಲು’ ಗಾಂಧೀಜಯಂತಿ ದಿನವಾದ ಅಕ್ಟೋಬರ್ 2ರಿಂದ ರಾಜ್ಯದಲ್ಲೂ ತನ್ನ ಸಂಚಾರ ಆರಂಭಿಸಲಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗಲೆಂದು ಚಲಿಸುವ ಅರಮನೆ ವಿಶೇಷ ರೈಲಿನ ಸೌಲಭ್ಯವನ್ನು ರಾಜ್ಯಕ್ಕೂ ವಿಸ್ತರಿಸಲಾಗಿದೆ.
ಅಕ್ಟೋಬರ್ 2ರಂದು ಬೆಂಗಳೂರಿನಿಂದ ಹೊರಡುವ ರೈಲು ಮೈಸೂರಿನಲ್ಲಿ 2 ದಿನ ಇದ್ದು, ನಂತರ ಹಾಸನದತ್ತ ಪ್ರಯಾಣ ಬೆಳಸಲಿದೆ. ಪ್ರವಾಸಿಗರು, ಶ್ರವಣಬೆಳಗೊಳ, ಬೇಲೂರು, ಹಳೇಬೀಡು ವೀಕ್ಷಿಸಿದ ಬಳಿಕ ರೈಲು ಆಳ್ನಾವರದತ್ತ ಸಾಗಲಿದೆ. ದಾಂಡೇಲಿಯ ಅಭಯಾರಣ್ಯ, ಜಲಪಾತ ವೀಕ್ಷಣೆಯ ನಂತರ ಪ್ರವಾಸಿಗರಿಗೆ ಗದಗಿನಲ್ಲಿ ತಂಗಲು ಅವಕಾಶ ಇದೆ.
ಬದಾಮಿ, ಪಟ್ಟದಕಲ್ಲು, ಐಹೊಳೆ ವೀಕ್ಷಣೆಯ ನಂತರ ಹೊಸಪೇಟೆಗೆ ಪ್ರವಾಸಿಗರನ್ನು ಈ ಅರಮನೆ ರೈಲು ಕರೆತರಲಿದೆ. ಹಂಪೆಯ ವೀಕ್ಷಣೆಯ ಬಳಿಕ ಪ್ರವಾಸದ ಕೊನೆಯ ದಿನ ಸಂಚಾರಿ ಅರಮನೆ ಹೊಸಪೇಟೆಯಿಂದ ಬೆಂಗಳೂರಿಗೆ ಮರಳಲಿದೆ. ಪ್ರವಾಸಿಗರಿಗೆ ರೈಲು ನಿಲ್ದಾಣದ ಹತ್ತಿರ ಸ್ಥಳಗಳ ವೀಕ್ಷಣೆಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಾಯೋಗಿಕವಾಗಿ ಅಕ್ಟೋಬರ್ 2ರಿಂದ ಅರಮನೆ ರೈಲು ಸಂಚಾರ ಆರಂಭ. ಈ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಉನ್ನತ ಮಟ್ಟದ ಸಮಿತಿಯಾಂದನ್ನು ರಚಿಸಲಾಗಿದೆ. ಸಮಿತಿಯಲ್ಲಿ ಕೇಂದ್ರ ಸರಕಾರದ ಅಧಿಕಾರಿಗಳು, ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಉನ್ನತಾಧಿಕಾರಿಗಳೂ ಇದ್ದಾರೆ.
6 ಇರುಳು ಹಾಗೂ 7 ದಿನಗಳ ಈ ಪ್ರವಾಸದಲ್ಲಿ ಪ್ರವಾಸಿಗರಿಗೆ ರೈಲಿನಲ್ಲಿ ಊಟ, ವಸತಿಯ ಜತೆಗೆ ಮನರಂಜನೆಯ ಕಾರ್ಯಕ್ರಮಗಳನ್ನೂ ವ್ಯವಸ್ಥೆ ಮಾಡಲಾಗಿದೆ. ಆದರೆ, ಪ್ರವಾಸ ವೆಚ್ಚ ಮಾತ್ರ ತುಸು ದುಬಾರಿ. ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಲು (ಒಬ್ಬರಿಗೆ) ಪ್ರತಿದಿನಕ್ಕೆ 150ರಿಂದ 200 ಅಮೆರಿಕನ್ ಡಾಲರ್ ತೆರಬೇಕಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...