ಉತ್ತರ ಕರ್ನಾಟಕಅಭಿವೃದ್ಧಿ : ಸೆಪ್ಟೆಂಬರ್ಗೆ ಮುನ್ನಸಭೆ ಕರೆವಂತೆ ಆಗ್ರಹ
ಹುಬ್ಬಳ್ಳಿ : ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮತ್ತೊಮ್ಮೆ ದನಿಯೆದ್ದಿದೆ. ಕಳೆದ ಹಲವಾರು ದಶಕಗಳಿಂದ ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳೂ ತೋರಿದ ನಿರ್ಲಕ್ಷ್ಯದಿಂದಾಗಿರುವ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಇನ್ನೆರಡು ತಿಂಗಳೊಳಗೆ ಸಭೆ ಕರೆಯದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಉತ್ತರ ಕರ್ನಾಟಕ ಅಭಿವೃದ್ಧಿಪರ ಹೋರಾಟ ವೇದಿಕೆ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಭಾನುವಾರ ಉತ್ತರ ಕರ್ನಾಟಕ ಅಭಿವೃದ್ಧಿ ಪರ ವೇದಿಕೆಯಡಿ ನಡೆದ ಸಾರ್ವಜನಿಕ ಸಭೆಯಲ್ಲಿ ಕವಿ ಚೆನ್ನವೀರ ಕಣವಿ, ಖ್ಯಾತ ಹಿಂದೂಸ್ಥಾನೀ ಗಾಯಕಿ ಗಂಗೂಬಾಯಿ ಹಾನಗಲ್, ಜಾನಪದ ಸಾಹಿತಿ ಡಾ. ದೇವೇಂದ್ರ ಕುಮಾರ ಹಕಾರಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು. ವಿ. ಬಿ. ಹೊಂಬಳ ಅವರು ಅಸಮತೋಲನ ನಿವಾರಣೆ ಕುರಿತ ಚರ್ಚಾ ಸಭೆ ಕರೆಯಲು ಸರಕಾರಕ್ಕೆ ಎರಡು ತಿಂಗಳ ಗಡುವು ನೀಡುವ ನಿರ್ಣಯ ಮಂಡಿಸಿ, ಸರಕಾರ ತನ್ನ ನಿರ್ಲಕ್ಷ್ಯವನ್ನು ಮುಂದುವರೆಸಿದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಉತ್ತರ ಕರ್ನಾಟಕದ ಶಿಕ್ಷಣ ಮತ್ತು ಆರ್ಥಿಕ ತಜ್ಞರು ಹಾಗೂ ಪರಿಣತರ ಸಾಮಾಜಿಕ ಚಿಂತನ ವೇದಿಕೆಯಾಂದನ್ನು ರಚಿಸಲು ಇದೇ ಸಂದರ್ಭದಲ್ಲಿ ನಿರ್ಧರಿಸಲಾಯಿತು. ಈ ಪ್ರದೇಶದ ಅಭಿವೃದ್ಧಿ ಕುರಿತಂತೆ ಜಾಗೃತಿ ಮೂಡಿಸಲು ಉತ್ತರ ಕರ್ನಾಟಕದ ಶಾಸಕರ ಸಭೆಯನ್ನು ಜುಲೈ 24ರಂದು ಬೆಂಗಳೂರಿನಲ್ಲಿ ಕರೆಯಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಪಾಟೀಲ ಪುಟ್ಟಪ್ಪ ತಿಳಿಸಿದರು.
(ಇನ್ಫೋ ವಾರ್ತೆ)