ಚೆನ್ನೈ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ : ಡಿಜಿಪಿ
ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಕೇಂದ್ರ ಸಚಿವರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಪೊಲೀಸ್ ಮಹಾ ನಿರ್ದೇಶಕ ರವೀಂದ್ರನಾಥ್ ತಳ್ಳಿಹಾಕಿದ್ದಾರೆ. ಆದರೆ, ಕೇಂದ್ರದಿಂದ ಈ ಸಂಬಂಧ ಪತ್ರ ಬಂದಿದ್ದು, ಇದನ್ನು ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಕಾರ್ಯದರ್ಶಿ ಪಿ. ಶಂಕರ್ ತಿಳಿಸಿದ್ದಾರೆ.
ಬುಧವಾರ ರಾತ್ರಿ ತಮಿಳುನಾಡಿನ ಮುಖ್ಯಕಾರ್ಯದರ್ಶಿಗಳನ್ನು ತಲುಪಿರುವ ಕೇಂದ್ರ ಸರಕಾರದ ಪತ್ರದಲ್ಲಿ ಕಳೆದ ಶನಿವಾರ ಘಟಿಸಿದಂತಹ ಘಟನೆ ಮುಂದೆಂದೂ ಆಗದಂತೆ ಎಚ್ಚರವಹಿಸುವಂತೆ ಸೂಚಿಸಲಾಗಿದೆ. ಕರುಣಾನಿಧಿ ಅವರನ್ನು ಬಂಧಿಸುವಾಗ ಅಮಾನವೀಯವಾಗಿ ವರ್ತಿಸಿದ ಮತ್ತು ಕೇಂದ್ರ ಸಚಿವರೊಂದಿಗೆ ಅನುಚಿತವಾಗಿ ನಡೆದುಕೊಂಡ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ತಿಳಿಸಲಾಗಿದೆ.
ನಾಲ್ಕು ಪುಟಗಳ ಆ ಪತ್ರದಲ್ಲಿ ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿಯದಂತೆ ಜಯಲಲಿತಾ ಅವರ ಸರಕಾರಕ್ಕೆ ಕಿವಿ ಮಾತು ಹೇಳಲಾಗಿದೆ. ಇಂತಹ ಅಹಿತಕರ ವಾತಾವರಣದಿಂದ ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬರುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಈ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ತಮಿಳುನಾಡಿನ ಇಬ್ಬರು ಉನ್ನತ ಅಧಿಕಾರಿಗಳು ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ.
ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿರುವ ಡಿ.ಜಿ.ಪಿ. ತಮ್ಮ ಇಲಾಖೆಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲ. ಪೊಲೀಸರು ಅವರ ಕರ್ತವ್ಯವನ್ನು ಸೂಕ್ತವಾಗಿ ನಿಬಾಯಿಸಿದ್ದಾರೆ ಎಂದಿದ್ದರೆ, ಮುಖ್ಯಕಾರ್ಯದರ್ಶಿಯವರು, ತಾವು ಈ ಸಂಬಂಧ ಜಯಲಲಿತಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಫಾತಿಮಾ ಬೀವಿಗೆ ಬೀಳ್ಕೊಡುಗೆ: ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಬಂಧನದ ಹಗರಣಕ್ಕೆ ಸಂಬಂಧಿಸಿದಂತೆ ಪದಚ್ಯುತರಾದ ತಮಿಳುನಾಡಿನ ಮಾಜಿ ರಾಜ್ಯಪಾಲೆ ಫಾತೀಮಾ ಬೀವಿ ಅವರಿಗೆ ಗುರುವಾರ ಗೌರವಯುತವಾಗಿ ಬೀಳ್ಕೊಡಲಾಯಿತು.
ಮುಖ್ಯಮಂತ್ರಿ ಜಯಲಲಿತಾ ಹಾಗೂ ಅವರ ಸಂಪುಟದ ಹಲವು ಸಹೋದ್ಯೋಗಿಗಳು ವಿಮಾನ ನಿಲ್ದಾಣದಲ್ಲಿ ಹಾಜರಿದ್ದು, ಫಾತಿಮಾ ಬೀವಿ ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು.
ನಾಳೆ ಆಸ್ಪತ್ರೆಗೆ ಎಂ.ಕೆ: ಗುರುವಾರ ಎಂ. ಕರುಣಾನಿಧಿ ಅವರನ್ನು ವೈದ್ಯರ ತಂಡ ಪರೀಕ್ಷಿಸಿದ್ದು, ತುಂಬಾ ಬಳಲಿರುವ ಮಾಜಿ ಮುಖ್ಯಮಂತ್ರಿ ಶುಕ್ರವಾರ ಅಪೊಲೋ ಆಸ್ಪತ್ರೆಗೆ ದಾಖಲಾಗುವರು ಎಂದು ಮೂಲಗಳು ತಿಳಿಸಿವೆ. ಗುರುವಾರ ಕೇಂದ್ರ ಸಚಿವ ವೆಂಕಯ್ಯ ನಾಯ್ದು ಅವರು, ಕರುಣಾನಿಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.