ಹಳೆಯ ಅಸ್ತ್ರದೊಂದಿಗೆ ರೈತ ಸಂಘದಿಂದ ‘ಅಕ್ಕಿ ಬೇಳೆ ಚಳುವಳಿ’
ಹಾಸನ : ನೀರಾ ಚಳುವಳಿಯ ಬಿರುಸು ಕಡಿಮೆಯಾಗುತ್ತಿದ್ದಂತೆಯೇ ರಾಜ್ಯ ರೈತ ಸಂಘ ಹೊಸದೊಂದು ಅಭಿಯಾನ ಶುರು ಮಾಡಿದೆ. ಅದರ ಹೆಸರು ‘ಅಕ್ಕಿ ಬೇಳೆ ಚಳುವಳಿ’.
ಅಕ್ಕಿ ಬೇಳೆ ಚಳುವಳಿಯಲ್ಲಿಯೂ ಸರಕಾರವನ್ನು ದೂಷಿಸಲು ಸಂಘ ಬಳಸುವ ಅಸ್ತ್ರ ಹಳೆಯದೇ. ಜಾಗತೀಕರಣ ಮತ್ತು ಉದಾರೀಕರಣದಿಂದ ರೈತರ ಹಿತಾಸಕ್ತಿಯನ್ನು ಸರಾಕರ ಕಡೆಗಣಿಸಿದೆ ಎಂಬುದು. ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂದದಿಂದಾಗಿ, ರೈತರು ಬೆಲೆಕುಸಿತ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ರೈತರೇ ನೇರ ಅಕ್ಕಿ ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ . ರೈತರ ಸಂವಿಧಾನ ಬದ್ಧ ಹಕ್ಕನ್ನು ಮೊಟಕುಗೊಳಿಸಿ ವರ್ತಕರನ್ನೇ ಬೆಂಬಲಿಸುವ ಸರಕಾರದ ಕ್ರಮವನ್ನು ಖಂಡಿಸಿ ಅಕ್ಕಿ ಬೇಳೆ ಚಳುವಳಿ ನಡೆಯಲಿದೆ.
ಕಾನೂನನ್ನು ಉಲ್ಲಂಘಿಸಿಯಾದರೂ, ರೈತರೇ ಅಕ್ಕಿಯನ್ನು ನೇರವಾಗಿ ಹೊರರಾಜ್ಯಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಸರಕಾರ ತನ್ನ ನೀತಿಯನ್ನು ಮಾರ್ಪಾಡು ಮಾಡುವವರೆಗೆ ಈ ಅಕ್ಕಿ ಬೇಳೆ ಚಳುವಳಿ ಮುಂದುವರೆಯಲಿದೆ. ಚಳುವಳಿಯು ಪ್ರಸ್ತುತ ಹಂಗಾಮದಿಂದಲೇ ಆರಂಭವಾಗಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಸ್ಪಷ್ಟಪಡಿಸಿದ್ದಾರೆ.
(ಇನ್ಫೋ ವಾರ್ತೆ)