ಪಿಯುಸಿ ಸಂಜೆ ಕಾಲೇಜುಗಳಿಗೆ ಮರು ಜೀವ !
ಬೆಂಗಳೂರು : ಶಿಕ್ಷಣ ಇಲಾಖೆ ಕಾಲೇಜುಗಳನ್ನು ಮುಚ್ಚುವ ತನ್ನ ಹೆಜ್ಜೆಯನ್ನು ಮತ್ತೊಮ್ಮೆ ಹಿಂತೆಗೆದಿದೆ. ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜು ಇಲಾಖೆಗಳನ್ನು ಮುಚ್ಚುವ ನಿರ್ಧಾರ ಹೊರಡಿಸಿದ ಮರು ದಿನವೇ ಆ ಆದೇಶವನ್ನು ಹಿಂದಕ್ಕೆ ಪಡೆಯಿತು. ಈಗ ವಿವಾದಿತ ನಿರ್ಧಾರವಾಗಿದ್ದ ಸಂಜೆ ಕಾಲೇಜುಗಳನ್ನು ಮುಚ್ಚುವ ನಿರ್ಧಾರವನ್ನೂ ಶಿಕ್ಷಣ ಇಲಾಖೆ ವಾಪಸ್ಸು ಪಡೆದಿದೆ.
ಕಾಲೇಜು ಶಿಕ್ಷಣದ ಕಮಿಷನರ್ ಮಂಗಳವಾರ ಹೊರಡಿಸಿರುವ ಆದೇಶದಲ್ಲಿ 2001-2002ನೇ ಸಾಲಿಗಾಗಿ ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತೆ ಸಂಜೆ ಕಾಲೇಜುಗಳಿಗೆ ತಿಳಿಸಿದೆ. ಸಂಯುಕ್ತ ಸಂಜೆ ಕಾಲೇಜುಗಳು ಇನ್ನು ಮುಂದೆ ಸ್ವಾಯತ್ತ ಸಂಜೆ ಕಾಲೇಜುಗಳಾಗಿ ಕಾರ್ಯ ನಿರ್ವಹಿಸಲಿದ್ದು, ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಹುದಾಗಿದೆ ಎಂದು ಕಾಲೇಜು ಶಿಕ್ಷಣದ ಕಮಿಷನರ್ ಕೆ.ಎ.ಬೆಳ್ಳಿಯಪ್ಪ ಆದೇಶ ಹೊರಡಿಸಿದ್ದಾರೆ.
ಪಿಯು ಕಾಲೇಜುಗಳನ್ನು ಪದವಿ ಕಾಲೇಜುಗಳಿಂದ ಪ್ರತ್ಯೇಕಿಸುವ ಹಾಗೂ ಸಂಜೆ ಕಾಲೇಜುಗಳನ್ನು ಮುಚ್ಚುವ ಆದೇಶವನ್ನು ಸರ್ಕಾರ ಈ ಮೊದಲು ಹೊರಡಿಸಿತ್ತು. ರಾಜ್ಯಾದ್ಯಂತ ಸರ್ಕಾರದ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೆಲವು ಕಡೆ ಪ್ರತಿಭಟನೆ, ಸಂಪುಗಳೂ ನಡೆದಿದ್ದವು.
ಇನ್ನು ಮುಂದೆ ಸಂಜೆ ಕಾಲೇಜುಗಳಲ್ಲಿ ಪಿಯುಸಿ ಬೋಧನೆ ಇರುವುದಿಲ್ಲ ಎಂಬ ಫಲಕ ಎಷ್ಟೋ ಕಾಲೇಜುಗಳಲ್ಲಿ ಕಾಣುತ್ತಿತ್ತು. ಈಗ ಸರ್ಕಾರದ ಆದೇಶದಿಂದ ಈ ಬೋರ್ಡನ್ನು ಅಳಿಸಬೇಕಾಗಿದೆ. ಸರ್ಕಾರ ಹೀಗೇಕೆ ಮಾಡುತ್ತದೆ. ಈ ನಿರ್ಧಾರವನ್ನು ಮೊದಲೇ ಬದಲಿಸಿದ್ದರೆ ಎಷ್ಟು ಚೆನ್ನಾಗಿತ್ತು. ಈಗ ಪ್ರಸ್ತುತ ಶೈಕ್ಷಣಿಕ ವರ್ಷದ ಬೋಧನಾ ಕ್ರಮದಲ್ಲಿ ಏರುಪೇರು ಮಾಡುವುದು ಅನಿವಾರ್ಯವಾಗಿದೆ. ಯಾಕೆಂದರೆ ತರಗತಿಗಳು ಈಗಾಗಲೇ ಶುರುವಾಗಬೇಕಿತ್ತು ಎನ್ನುತ್ತಾರೆ ನಗರದ ಕಾಲೇಜೊಂದರ ಪ್ರಾಂಶುಪಾಲ.
ಒಟ್ಟಿನಲ್ಲಿ, ಸರ್ಕಾರದ ಬದಲಾದ ಈ ನಿಲುವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ ವಿಳಂಬ ನೀತಿಗೆ ಏನನ್ನುವುದು? ಸರ್ಕಾರವೇ ಹಾಗೇ ಅನ್ನೋಣವಾ!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...