ಜೈಲಿನಿಂದ ಹೊರಬರಲು ಬಾಲು, ಮುರಸೋಳಿ ಮಾರನ್ ನಿರಾಕರಣೆ
ಚೆನ್ನೈ : ಶನಿವಾರ ತಮಿಳುನಾಡು ಪೊಲೀಸರು ಬಂಧಿಸಿದ್ದ ಕೇಂದ್ರ ಸಚಿವರಾದ ಮುರಸೋಳಿ ಮಾರನ್ ಹಾಗೂ ಟಿ.ಆರ್. ಬಾಲು ಅವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಈ ಇಬ್ಬರು ಸಚಿವರು ಜೈಲಿನಿಂದ ಹೊರಬರಲು ನಿರಾಕರಿಸಿದ್ದಾರೆ.
ವೆಲ್ಲೂರು ಜೈಲಿನಲ್ಲಿರುವ ಟಿ.ಆರ್. ಬಾಲು ಹಾಗೂ ಅಪೊಲೋ ಆಸ್ಪತ್ರೆಯಲ್ಲಿ ವೈದ್ಯರ ತೀವ್ರ ನಿಗಾದಲ್ಲಿ ಇರುವ ಮುರಸೋಳಿ ಮಾರನ್ ಅವರು, ತಮ್ಮ ವಿರುದ್ಧದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವವರೆಗೂ ತಾವು ಜೈಲಿನಿಂದ ಹೊರಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ತಾವು ಅಪರಾಧಿಗಳು ಎಂದು ಸಾಬೀತಾಗಿ ತಮಗೆ ಶಿಕ್ಷೆ ಆಗಬೇಕು, ಇಲ್ಲವೇ ತಾವು ನಿರಪರಾಧಿಗಳು ಎಂಬುದು ಜಗತ್ತಿಗೇ ತಿಳಿಯಬೇಕು. ಅಲ್ಲಿಯವರೆಗೆ ತಾವು ಬಂಧನದಿಂದ ಮುಕ್ತರಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರು ಕೂಡ ತಮಗೆ ಜಾಮೀನು ಬೇಡ, ನಾನು ಕಾನೂನು ಸಮರ ಸಾರುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಕೇಂದ್ರ ಸಚಿವರಿಬ್ಬರ ಹಾಗೂ ಕರುಣಾನಿಧಿ ಅವರ ಈ ನಿರ್ಧಾರ ಜಯಲಲಿತಾ ನೇತೃತ್ವದ ಸರಕಾರವನ್ನು ಪೇಚಿಗೆ ಸಿಲುಕಿಸುವ ತಂತ್ರ ಎಂದು ಬಣ್ಣಿಸಲಾಗುತ್ತಿದೆ.
ಬಂದ್ ಭಾಗಶಃ ಯಶಸ್ವಿ : ಈ ಮಧ್ಯೆ ಕರುಣಾನಿಧಿ ಅವರ ಬಂಧನವನ್ನು ಪ್ರತಿಭಟಿಸಿ ಕರೆಯಲಾಗಿದ್ದ ತಮಿಳುನಾಡು ಬಂದ್ ಭಾಗಶಃ ಯಶಸ್ವಿಯಾಗಿದೆ. ಕೆಲವೆಡೆ ಹಿಂಸಾಚಾರ ನಡೆದ ವರದಿಗಳು ಬಂದಿವೆ. ಕೆಲವೆಡೆ ಅಂಗಡಿ ಮುಂಗಟ್ಟುಗಳು ತೆರೆದಿದ್ದರೆ, ಮತ್ತೆ ಕೆಲವೆಡೆ ಅಂಗಡಿ ಮಾಲಿಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳ ಬಾಗಿಲು ಮುಚ್ಚಿದ್ದರು. ಒಟ್ಟಾರೆಯಾಗಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಸಂಚಾರ ಬಹುತೇಕ ಅಸ್ತವ್ಯಸ್ತವಾಗಿತ್ತು.
ಮುಖಪುಟ / ಇವತ್ತು... ಈ ಹೊತ್ತು...