ತಮಿಳುನಾಡಿನ ರಾಜ್ಯಪಾಲರಾಗಿ ಬಿಜೆಪಿಯ ಸಿಕಂದರ್ ಭಕ್ತ್?
ನವದೆಹಲಿ : ತೆರವಾದ ಫಾತಿಮಾ ಬೀವಿ ಅವರ ಸ್ಥಾನದಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಿಕಂದರ್ ಭಕ್ತ್ ನೇಮಕಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಪ್ರಸ್ತುತ ಆಂಧ್ರಪ್ರದೇಶದ ರಾಜ್ಯಪಾಲ ಸಿ.ರಂಗರಾಜನ್ ಅವರು ತಮಿಳುನಾಡಿನ ರಾಜ್ಯಪಾಲರಾಗಿ ಹೆಚ್ಚುವರಿ ಹೊಣೆ ಹೊತ್ತಿದ್ದು, ಆ ಸ್ಥಾನವನ್ನು ತುಂಬುವಲ್ಲಿ ಸಿಕಂದರ್ ಭಕ್ತ್ ಹಾಗೂ ಮಹಾರಾಷ್ಟ್ರದ ರಾಜ್ಯಪಾಲ ಪಿ.ಸಿ. ಅಲೆಕ್ಸಾಂಡರ್ ಅವರ ಹೆಸರುಗಳು ಕೇಳಿಬರುತ್ತಿವೆ. ಪ್ರಸ್ತುತ ವಿದೇಶ ಪ್ರವಾಸದಲ್ಲಿರುವ ಗೃಹ ಸಚಿವ ಎಲ್.ಕೆ.ಅಡ್ವಾಣಿ ವಾಪಸ್ಸಾದ ನಂತರ ತಮಿಳುನಾಡು ರಾಜ್ಯಪಾಲರ ನೇಮಕವನ್ನು ಅಂತಿಮಗೊಳಿಸಲಾಗುವುದು.
ಫಾತಿಮಾ ಬೀವಿ ಅವರ ನಿರ್ಗಮನದಿಂದ ಅಸಮಾಧಾನಗೊಂಡಿರುವ ಮುಸ್ಲಿಂರನ್ನು ಸಮಾಧಾನಗೊಳಿಸಲು ಅದೇ ಕೋಮಿನ ಭಕ್ತ್ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿಸಲು ಬಿಜೆಪಿಯ ಚಿಂತಕರ ಚಾವಡಿ ಉತ್ಸುಕವಾಗಿದೆ ಎಂದು ದೆಹಲಿಯ ರಾಜಕೀಯ ಮೂಲಗಳು ತಿಳಿಸಿವೆ. ಈ ಕ್ರಮ, ಕ್ಯಾಬಿನೆಟ್ನಲ್ಲಿ ಸ್ಥಾನ ಸಿಗದ ಭಕ್ತ್ ಅವರನ್ನು ಸಮಾಧಾನಗೊಳಿಸುವ ಕ್ರಮವೆಂದೂ ವಿಶ್ಲೇಷಿಸಲಾಗುತ್ತಿದೆ.
(ಇನ್ಫೋ ವಾರ್ತೆ)