ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆಯೇ?
ಕೇಂದ್ರ ಸಚಿವರಾದ ಮುರಸೋಳಿ ಮಾರನ್ ಹಾಗೂ ಟಿ.ಆರ್. ಬಾಲು ಅವರನ್ನು ಬಂಧಿಸಿರುವ ಘಟನೆಯೇ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಸಾಕು ಅನ್ನುತ್ತಾರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜನಾ ಕೃಷ್ಣಮೂರ್ತಿ.
ಭಾನುವಾರ ತಮಿಳುನಾಡಿನ ವಿದ್ಯಮಾನಗಳನ್ನು ಅಧ್ಯಯನ ಮಾಡಿರುವ ತ್ರಿಸದಸ್ಯರ ಸಮಿತಿ ಕೂಡ, ಜಯಲಲಿತಾ ಸರ್ಕಾರ ಸಂಸತ್ತಿನ ಹಕ್ಕುಚ್ಯುತಿ ಎಸಗಿದೆ ಎಂದು ಹೇಳಿದ್ದು , ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿದೆ. ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದ ಬಹುತೇಕ ನಾಯಕರದು ಇದೇ ಅಭಿಪ್ರಾಯ.
ಆದರೆ, ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬಗ್ಗೆ ಪ್ರತಿ ಪಕ್ಷಗಳು ಒಲವು ವ್ಯಕ್ತಪಡಿಸಿಲ್ಲ . ರಾಜ್ಯಪಾಲೆ ಫಾತಿಮಾ ವಜಾ- ರಾಜೀನಾಮೆ ಪ್ರಕರಣದ ಬಗೆಗೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರದ ಡಮ್ಮಿ ಪ್ರತಿನಿಧಿಯನ್ನು ಪ್ರತಿಷ್ಠಾಪಿಸುವ ಹುನ್ನಾರ ಎಂದು ರಾಜ್ಯಪಾಲರ ರಾಜೀನಾಮೆ ಪ್ರಕರಣವನ್ನು ಕಾಂಗ್ರೆಸ್ ಬಣ್ಣಿಸಿದೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಲಿಕ್ಕೆ ಕಾಂಗ್ರೆಸ್ ತೀವ್ರ ವಿರೋಧ ಸೂಚಿಸುವುದು ಖಚಿತ.
ಕೇಂದ್ರ ಸಚಿವ ಸಂಪುಟ ಸಭೆ ಸೋಮವಾರ ಮತ್ತೆ ಸೇರಲಿದ್ದು , ಸಂಪುಟ ಸಭೆಯ ನಂತರವಷ್ಟೇ ತಮಿಳುನಾಡು ಸರ್ಕಾರದ ಹಣೆಬರಹ ನಿರ್ಧಾರವಾಗುತ್ತದೆ. ಕರುಣಾನಿಧಿ ಬಂಧನದ ನಂತರ ಭಾನುವಾರ ರಜಾದಿನ ನಡೆದ ಪ್ರಮುಖ ವಿದ್ಯಮಾನಗಳಿವು-
- ಕರ್ತವ್ಯಲೋಪದ ಹಿನ್ನೆಲೆಯಲ್ಲಿ ತಮಿಳುನಾಡಿನ ರಾಜ್ಯಪಾಲೆ ಫಾತಿಮಾ ಬೀವಿ ಅವರನ್ನು ವಜಾ ಮಾಡಲು ಕೇಂದ್ರ ಸಚಿವ ಸಂಪುಟ ಇಂಗಿತ. ತಕ್ಷಣವೇ ಫಾತಿಮಾ ಬೀವಿ ರಾಜೀನಾಮೆ.
- ಆಂಧ್ರಪ್ರದೇಶದ ರಾಜ್ಯಪಾಲ ಸಿ.ರಂಗರಾಜನ್ ಅವರಿಗೆ ತಮಿಳುನಾಡಿನ ಹೆಚ್ಚುವರಿ ಹೊಣೆ.
- ತಮಿಳುನಾಡಿನಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದ ನಿಯೋಗ ಶಿಫಾರಸ್ಸು . ನಿಯೋಗದಲ್ಲಿದ್ದವರು- ಎನ್ಡಿಎ ಸಂಚಾಲಕ ಜಾರ್ಜ್ ಫರ್ನಾಂಡಿಸ್, ಬಿಜೆಪಿ ಉಪಾಧ್ಯಕ್ಷ ವಿಜಯ್ ಕುಮಾರ್ ಹಾಗೂ ಅಕಾಲಿದಳದ ನಾಯಕ ಸುಖದೇವ್ ಸಿಂಗ್ ಧಿಂಡ್ಸಾ.
- ತಮಿಳುನಾಡಿನಲ್ಲಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಬಗ್ಗೆ ಬಿರುಸಾಗುತ್ತಿರುವ ಪರ ವಿರೋಧ ಚರ್ಚೆಗಳು.
- ಕರುಣಾನಿಧಿ ಬಂಧನ ಕಾನೂನು ಪರಿಧಿಯಾಳಗೇ ನಡೆದಿದೆ ಎಂದು ಪೊಲೀಸರ ಸಮರ್ಥನೆ. ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ವಿಡಿಯೋ ಕ್ಯಾಸೆಟ್ ಬಿಡುಗಡೆ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...