ಕರುಣಾನಿಧಿ ಅವರನ್ನು ಬಂಧಿಸಿದ ರೀತಿ ಸರಿಯಲ್ಲ :ಎಸ್.ಎಂ. ಕೃಷ್ಣ
ಬೆಂಗಳೂರು: ತಮಿಳುನಾಡಿನ ರಾಜ್ಯಪಾಲರಾದ ಫಾತಿಮಾ ಬೀವಿ ಅವರನ್ನು ಪದಚ್ಯುತಗೊಳಿಸಿದ ಬಗ್ಗೆ ಪ್ರತಿಕ್ರಿಯೆ ನೀಡಲು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿರಾಕರಿಸಿದ್ದಾರೆ. ಆದರೆ, ನಾಲ್ಕುಬಾರಿ ರಾಜ್ಯವನ್ನಾಳಿದ ಮಾಜಿ ಮುಖ್ಯಮಂತ್ರಿಯಾಬ್ಬರನ್ನು ಬಂಧಿಸಿದ ರೀತಿಯ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ರಾಜ್ಯಪಾಲರನ್ನು ವಾಪಸ್ ಕರೆಸಿಕೊಂಡ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ. ರಾಜ್ಯಪಾಲರಿಂದ ಕೇಂದ್ರ ಸರಕಾರ ಏನು ನಿರೀಕ್ಷಿಸಿತ್ತು ಎಂಬುದು ನನಗೆ ಗೊತ್ತಿಲ್ಲ. ಈ ಪ್ರಕರಣದ ಬಗ್ಗೆ ರಾಜ್ಯಪಾಲರು ಮೊದಲೇ ಏಕೆ ವರದಿ ಕಳುಹಿಸಲಿಲ್ಲ ಎಂಬುದೂ ನನಗೆ ಗೊತ್ತಿಲ್ಲ ಹೀಗಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ರಾಜಭವನದಲ್ಲಿ ರಾಜ್ಯದ ಹೊಸ ಲೋಕಾಯಕ್ತರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಸೂಕ್ತವೇ? ಅಲ್ಲವೇ ಎಂಬ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಆದರೆ, ಕರುಣಾನಿಧಿ ಅವರನ್ನು ಬಂಧಿಸಿದ ರೀತಿ ಸರಿಯಲ್ಲ. ನಾಲ್ಕು ಅವಧಿಗೆ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ರಾಜ್ಯ ಬಿಟ್ಟು ಓಡಿಹೋಗುವ ಸಾಧ್ಯತೆ ಇತ್ತೇ? ಅವೇಳೆಯಲ್ಲಿ ಅದೂ ಮಧ್ಯರಾತ್ರಿಯಲ್ಲಿ ಪೊಲೀಸರು ಅವರನ್ನು ಬಂಧಿಸುವ ಅಗತ್ಯ ಇತ್ತೇ ಎಂಬುದು ಪ್ರಶ್ನಾರ್ಹ. ಇದೊಂದು ದುರ್ದೈವದ ಸಂಗತಿ ಎಂದರು.
ಆರೋಪಿಗಳನ್ನು ಬಂಧಿಸುವುದು ತಪ್ಪಲ್ಲ. ಆದರೆ, ಪೊಲೀಸರು ಸೌಜನ್ಯದಿಂದ ವರ್ತಿಸಬಹುದಾಗಿತ್ತು. ಮಿಗಿಲಾಗಿ ಆರೋಪಿಗಳು ಕೂಡ ಸಜ್ಜನಿಕೆಯಿಂದ ಪೊಲೀಸರಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದರೆ, ಇಂತಹ ಪ್ರಮಾದ ಘಟಿಸುತ್ತಿರಲಿಲ್ಲ ಎಂದೂ ಅವರು ಅಭಿಪ್ರಾಯಪಟ್ಟರು. ಇದೊಂದು ರಾಜಕೀಯ ಪ್ರತೀಕಾರದ ಕ್ರಮ ಎಂದು ನಿಮಗನಿಸುತ್ತದೆಯೇ ಎಂದು ಪತ್ರಕರ್ತರು ಕೇಳಿದಾಗ. ಈ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು.
ವಿಶ್ರಾಂತಿಯ ಬಳಿಕ ಕೆಲಸಕ್ಕೆ ಹಾಜರ್ : ಐದು ದಿನಗಳ ಸುದೀರ್ಘ ವಿಶ್ರಾಂತಿಯ ನಂತರ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೋಮವಾರ ಅಧಿಕೃತ ಕಾರ್ಯಕಲಾಪಗಳಲ್ಲಿ ಪಾಲ್ಗೊಂಡರು. ಅಧಿಕೃತ ಕಾರ್ಯಕ್ರಮಗಳಲ್ಲೂ ಭಾಗವಹಿಸಿದರು.