ತಮಿಳುನಾಡು ಬಂದ್ !ವಿರಳ ಸಂಚಾರ, ವ್ಯಾಪಕ ಪೊಲೀಸ್
ಚೆನ್ನೈ : ಪಳೆಯುಳಿಕೆಗಳಂತೆ ವಿರಳ ವಾಹನ ಸಂಚಾರ, ಜಸ ಸಂಚಾರವೂ ವಿರಳ, ಚಟುವಟಿಕೆ ಕಾಣದ ಶಾಲೆ ಕಾಲೇಜು, ಅಂಗಡಿ ಮುಂಗಟ್ಟುಗಳಿಗೆ ಸ್ವಘೋಷಿತ ರಜೆ- ಇದು ಸೋಮವಾರದ ಮುಂಜಾವಿನ ತಮಿಳುನಾಡಿನ ರಾಜಧಾನಿ. ಡಿಎಂಕೆ ಧುರೀಣ ಎಂ. ಕರುಣಾನಿಧಿ ಹಾಗೂ ಇಬ್ಬರು ಕೇಂದ್ರ ಸಚಿವರ ಬಂಧನವನ್ನು ವಿರೋಧಿಸಿ ಮತ್ತು ಕರುಣಾನಿಧಿ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಎನ್ಡಿಎ ಕರೆ ಕೊಟ್ಟಿರುವ ಬಂದ್ಗೆ ಪ್ರತಿಕ್ರಿಯೆಯಿದು.
ಬೆಳಗ್ಗೆ ಬಸ್ ಸಂಚಾರ ಕಡಿಮೆಯಿದ್ದರೂ, ಬಿಸಿಲೇರಿದಂತೆ ಸಂಚಾರ ಎಂದಿನಂತಿರುತ್ತದೆ ಎಂದು ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಬಂದ್ ಕಾರಣವಾಗಿ ಸಂಭವಿಸಬಹುದಾದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿದೆ. ನಾಗರಿಕರಿಗೆ ಬಂದ್ನ ಬಿಸಿ ತಟ್ಟದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಂಡಿದೆ.
ಬಂದ್ ಕಾಲದಲ್ಲಿ ರಸ್ತೆಗಿಳಿದು ಕಾನೂನು ಭಂಗ ಚಟುವಟಿಕೆಗಳಲ್ಲಿ ತೊಡಗುವವರಿಗೆ ಕಂಡಲ್ಲಿ ಗುಂಡಿಕ್ಕಲು ಚೆನ್ನೈ ಪೊಲೀಸ್ ಕಮೀಷನರ್ ಕೆ.ಮುತ್ತುಕಾರುಪ್ಪನ್ ಆದೇಶ ಹೊರಡಿಸಿದ್ದಾರೆ. ಬಂದ್ ಕಾರಣವಾಗಿ ಬಹುತೇಕ ಶಾಲಾ ಕಾಲೇಜುಗಳು ಮುಚ್ಚಿವೆ. ರೈಲ್ವೆ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಈ ನಡುವೆ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳ ಹಾಗೂ ಆಂಧ್ರಪ್ರದೇಶಗಳು ತಮಿಳುನಾಡಿಗೆ ಹೋಗುವ ಬಸ್ಗಳ ಸಂಚಾರವನ್ನು ರದ್ದುಪಡಿಸಿವೆ.
(ಇನ್ಫೋ ವಾರ್ತೆ)