ಕರುಣಾನಿಧಿ ಬಂಧನಾ ನಂತರದ ಪರಿಸ್ಥಿತಿ : ಕೇಂದ್ರ ಸಂಪುಟ ಸಭೆ
ನವದೆಹಲಿ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಬಂಧನಾ ನಂತರದ ತಮಿಳುನಾಡು ವಿಧ್ಯಮಾನಗಳ ಬಗ್ಗೆ ಚರ್ಚಿಸಲು ಕೇಂದ್ರ ಸಚಿವ ಸಂಪುಟದ ಸಭೆ ಈ ಹೊತ್ತು ದೆಹಲಿಯಲ್ಲಿ ನಡೆಯುತ್ತಿದೆ. ಕರುಣಾನಿಧಿ ಅವರ ಬಂಧನಕ್ಕೆ ಸರ್ವತ್ರ ವಿರೋಧ ಕೇಳಿಬಂದಿದೆ.
ಬಹುತೇಕ ಎಲ್ಲ ರಾಜ್ಯಕೀಯ ಪಕ್ಷಗಳೂ ಪಕ್ಷಭೇದ ಮರೆತು ಇದನ್ನು ರಾಯಕೀಯ ಪ್ರತೀಕಾರದ ಕ್ರಮ ಎಂದು ಜರಿದಿವೆ. ಈ ಮಧ್ಯೆ ಎನ್.ಡಿ.ಎ. ಸಂಚಾಲಕ ಜಾರ್ಜ್ ಫರ್ನಾಂಡಿಸ್ ನೇತೃತ್ವದ ಮೂವರು ಸದಸ್ಯರ ನಿಯೋಗ ಚೆನ್ನೈಗೆ ಬಂದಿಳಿದಿದ್ದು, ಪರಿಸ್ಥಿತಿಯ ಖುದ್ದು ಅಧ್ಯಯನ ನಡೆಸುತ್ತಿದೆ.
ಹಿರಿಯ ರಾಜಕೀಯ ನಾಯಕರಾದ ದಿಂಡ್ಸೆ ಹಾಗೂ ಮಲ್ಹೋತ್ಸಾ ಅವರೊಂದಿಗೆ ಭಾನುವಾರ ಚೆನ್ನೈಗೆ ಆಗಮಿಸಿದ ಜಾರ್ಜ್ ಫರ್ನಾಂಡಿಸ್ ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ತಾವು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಭೇಟಿ ಮಾಡುವುದಿಲ್ಲ ಎಂದು ಹೇಳಿದರು.
ಕೇಂದ್ರ ಸಚಿವರಾದ ಟಿ.ಆರ್. ಬಾಲು, ಮುರಸೋಳಿ ಮಾರನ್ ಹಾಗೂ ಎಂ. ಕರುಣಾನಿಧಿ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಅವರು ತಿಳಿಸಿದರು. ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾರ್ಜ್ ಫರ್ನಾಂಡಿಸ್, ಕೇಂದ್ರ ಸಚಿವ ಸಂಪುಟ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು. ಆನಂತರ ಜೈಲಿಗೆ ತೆರಳಿ ಕರುಣಾನಿಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕೇಂದ್ರಕ್ಕೆ ವರದಿ : ಈ ಮಧ್ಯೆ ಕೇಂದ್ರ ಸರಕಾರದ ಸೂಚನೆಯಂತೆ ತಮಿಳುನಾಡಿನ ರಾಜ್ಯಪಾಲರಾದ ಫಾತಿಮಾ ಬೀವಿ ಅವರು ತಮಿಳ ನಾಡಿನ ವಿದ್ಯಮಾನಗಳ ಸಂಪೂರ್ಣ ವರದಿಯನ್ನು ಭಾನುವಾರ ಬೆಳಗ್ಗೆ 9 ಗಂಟೆಗೆ ಕೇಂದ್ರ ಸರಕಾರಕ್ಕೆ ರವಾನಿಸಿದರು. ಈ ಹಿನ್ನೆಲೆಯಲ್ಲಿ ಈ ಹೊತ್ತು ನಡೆಯುತ್ತಿರುವ ಸಚಿವ ಸಂಪುಟದ ಸಭೆಗೆ ಮಹತ್ವ ಬಂದಿದೆ.
ಎನ್ಡಿಎ ಅಂಗಪಕ್ಷವಾದ ಡಿ.ಎಂ.ಕೆ. ವಿರುದ್ಧ ಜಯಲಲಿತಾ ಅವರು ಕೈಗೊಂಡಿರುವ ರಾಜಕೀಯ ಪ್ರತಿಕಾರದ ಕ್ರಮ ಹಾಗೂ ಕೇಂದ್ರದ ಸಚಿವರಿಬ್ಬರ ಮೇಲೆ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯು ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳೂ ಇವೆ. ಜಯಲಲಿತಾ ಸರಕಾರದ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ತೆಲುಗು ದೇಶಂ ಪಕ್ಷ ಒತ್ತಾಯಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...