ಕರುಣಾನಿಧಿಯನ್ನು ಎಳೆದೊಯ್ದ ಪೊಲೀಸ್, ಗಾಯಾಳು ಮಾರನ್ ಆಸ್ಪತ್ರೆಗೆ
ಚೆನ್ನೆ : ಫ್ಲೈ ಓವರ್ ಅವ್ಯವಹಾರ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಎಂ. ಕರುಣಾನಿಧಿ ಅವರನ್ನು ಸಿಐಡಿ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಬೆಳಗ್ಗೆ 2 ಗಂಟೆ ಸುಮಾರಿಗೆ 78 ವರ್ಷದ ಹಿರಿಯ ರಾಜಕಾರಣಿ ಕರುಣಾನಿಧಿ ಅವರನ್ನು, ಅವರ ಗೋಪಾಲಪುರಂ ನಿವಾಸದಲ್ಲಿ ಬಂಧಿಸಲಾಯಿತು. ಕರುಣಾನಿಧಿ ಅವರನ್ನು ಬಂಧಿಸುವ ಸಮಯದಲ್ಲಿ ಅಡ್ಡಿ ಮಾಡಿದ ಕೇಂದ್ರ ಸಚಿವ ಮುರಸೋಳಿ ಮಾರನ್ ಅವರನ್ನು ಪೊಲೀಸರು ಥಳಿಸಿದ್ದು , ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಧನದ ಸಮಯದಲ್ಲಿ ಕರುಣಾನಿಧಿ ಅವರೊಂದಿಗೆ ಒರಟಾಗಿ ನಡೆದುಕೊಂಡಿರುವ ಪೊಲೀಸರು, ಅವರನ್ನು ಅನಾಮತ್ತು ಎಳೆದುಕೊಂಡು ಹೋಗಿದ್ದಾರೆ ಎಂದು ಚೆನ್ನೈ ವರದಿಗಳು ತಿಳಿಸಿವೆ. ಪೊಲೀಸರು ಎಳೆದೊಯ್ಯುವಾಗ ಕರುಣಾನಿಧಿ ಅವರು ಭಯದಿಂದ ಚೀರುತ್ತಿದ್ದರು ಎಂದು ಸನ್ ಟಿವಿ ವರದಿ ತಿಳಿಸಿದೆ.
ಮಾಜಿ ಮುಖ್ಯಮಂತ್ರಿಯನ್ನು ಬಂಧಿಸುವ ಪ್ರಕರಣವನ್ನು ಚಿತ್ರೀಕರಿಸಲು ಹೋದ ಪತ್ರಕರ್ತರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಫ್ಲೈ ಓವರ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರುಣಾನಿಧಿ ಅವರ ಪುತ್ರ ಹಾಗೂ ಚೆನ್ನೈ ಮೇಯರ್ ಸ್ಟಾಲಿನ್ ಪೊಲೀಸರಿಗೆ ಶರಣಾಗಿದ್ದಾರೆ.
(ಯುಎನ್ಐ)