ಬೆಂಗಳೂರಿನ ಅಂಗವಿಕಲರು ಲೈಟ್ ಬಿಲ್ ಕಟ್ಟಲು ಕ್ಯೂ ನಿಲ್ಲಬೇಕಿಲ್ಲ!
ಬೆಂಗಳೂರು : ನಗರದ ಕೆಲವು ಸಿವಿಲ್ ಸರ್ವೆಂಟ್ಗಳು ಕೊನೆಗೂ ಕರುಣಾಮಯಿಗಳಾಗಿದ್ದಾರೆ. ಇನ್ನು ಮುಂದೆ ಅಂಗವಿಕಲರು ಲೈಟ್ ಬಿಲ್ ಕಟ್ಟಲು ಕ್ಯೂ ನಿಲ್ಲಬೇಕಿಲ್ಲ. ಯಾವುದೋ ಪತ್ರ ಪಡೆಯಲು ಬಿಡಿಎಗೆ ಎಡತಾಕಬೇಕಿಲ್ಲ. ಅಧಿಕಾರಿಗಳು ಇವರಿಗಾಗೇ ವಿಶೇಷ ಸವಲತ್ತು ಜಾರಿಗೆ ತಂದಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಡಾಟ್ಕಾಂನಲ್ಲಿ ಈ ವರದಿ ಪ್ರಕಟವಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣಾ ಇಲಾಖೆ (ಕೆಪಿಟಿಸಿಎಲ್) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಂಗವಿಕಲರ ಮೊರೆಗೆ ಸ್ಪಂದಿಸಿವೆ. ಸಂಸ್ಥೆಗಳು ನೋಡಲ್ ಅಧಿಕಾರಿಯಾಬ್ಬರನ್ನು ನಿಯೋಜಿಸಲಿದ್ದು , ಇವರು ಅಂಗವಿಕಲರ ಕೆಲಸ ಸರಾಗ ಮಾಡಿಕೊಡಲಿದ್ದಾರೆ. ಆಡಳಿತ ಉಪ ಆಯುಕ್ತ ಯಶವಂತ್ ಪ್ರತಿ ಮಾಹೆಯ ಮೊದಲ ಸೋಮವಾರ 3ರಿಂದ 5 ಗಂಟೆಯವರೆಗೆ ಅಂಗವಿಕಲರಿಗೆ ಸಂಬಂಧಿಸಿದ ಕೆಲಸಗಳನ್ನು ಪರಿಶೀಲಿಸಲಿದ್ದಾರೆ.
ಕೆಪಿಟಿಸಿಎಲ್ ಹಾಗೂ ಬಿಡಿಎ ಅಂಗವಿಕಲರನ್ನು ಕ್ಯೂನಲ್ಲಿ ನಿಲ್ಲಿಸದೆ ಫಟಾಫಟನೆ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಿವೆ. ಕೆಪಿಟಿಸಿಎಲ್ನ ಬಿಲ್ ಸ್ವೀಕರಿಸುವ ಪ್ರತಿ ಕೌಂಟರ್ ಹಾಗೂ ಸಂಚಾರಿ ಕೌಂಟರ್ಗಳ ಸಿಬ್ಬಂದಿಗೂ ಅಂಗವಿಕಲರನ್ನು ಸತಾಯಿಸದೆ, ಆದ್ಯತೆ ನೀಡುವಂತೆ ತಿಳಿಸಲಾಗಿದೆ. ನೀರು ಸರಬರಾಜು ಮತ್ತು ಒಳ ಚರಂಡಿ ಇಲಾಖೆ, ಬಿಎಂಟಿಸಿ, ಕೆಎಸ್ಆರ್ಟಿಸಿ, ರೈಲ್ವೆ ನಿಲ್ದಾಣಗಳು, ಬ್ಯಾಂಕು, ಜಿಲ್ಲಾಧಿಕಾರಿಗಳ ಕಚೇರಿ ಮೊದಲಾದ 15 ಇಲಾಖೆಗಳಲ್ಲೂ ಈ ಸವಲತ್ತನ್ನು ಸದ್ಯದಲ್ಲೇ ವಿಸ್ತರಿಸಲಾಗುವುದು. ಕರುಣಾಮಯಿ ಅಧಿಕಾರಿಗಳಿಗೆ ಜೈ.
(ದಟ್ಸ್ ಕನ್ನಡ ವಾರ್ತೆ)