ಲಾಲ್ಬಾಗ್ ಪ್ರವೇಶ ಶುಲ್ಕ : ವಾಯು ವಿಹಾರಿಗಳ ಪ್ರತಿಭಟನೆ
ಬೆಂಗಳೂರು : ಲಾಲ್ಬಾಗ್ ಪ್ರವೇಶಕ್ಕೆ ಮುಂಜಾನೆಯ ವಾಯುವಿಹಾರಿಗಳಿಗೆ 1 ರುಪಾಯಿ ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರವನ್ನು ನೂರಾರು ವಾಯು ವಿಹಾರಾರ್ಥಿಗಳು ವಿರೋಧಿಸಿದ್ದಾರೆ.
ಗುರುವಾರ ಬೆಳಗ್ಗೆ ಲಾಲ್ಬಾಗ್ನ ಗಾಜಿನ ಮನೆ ಮುಂಭಾಗ ಸಭೆ ನಡೆಸಿದ ವಾಯು ವಿಹಾರಾರ್ಥಿಗಳು ಮುಂಜಾನೆ ಲಾಲ್ಬಾಗ್ಗೆ ಪ್ರವೇಶ ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು. ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮುಂಜಾನೆಯ ವಾಯು ವಿಹಾರ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕಾದ ಸರ್ಕಾರವೇ ಪ್ರವೇಶ ಶುಲ್ಕ ಹೇರುವ ಮೂಲಕ ಸಾರ್ವಜನಿಕರ ವಾಯು ವಿಹಾರಕ್ಕೆ ಅಡ್ಡಿ ಮಾಡುತ್ತಿದೆ ಎಂದು ಸಭೆ ಸರ್ಕಾರದ ನಿರ್ಧಾರವನ್ನು ಟೀಕಿಸಿತು.
ಪ್ರವೇಶ ಶುಲ್ಕವನ್ನು ವಾಪಸ್ಸು ತೆಗೆದುಕೊಳ್ಳದಿದ್ದಲ್ಲಿ ಜೂನ್ 30 ರಂದು ಬೆಳಗ್ಗೆ ಲಾಲ್ಬಾಗ್ ಗಾಜಿನ ಮನೆಯ ಎದುರಿಗೆ ಪ್ರತಿಭಟನಾ ಕಾರ್ಯಕ್ರಮ ನಡೆಸುವುದಾಗಿ ಶಾಸಕ ಕೆ.ಎನ್. ಸುಬ್ಬಾರೆಡ್ಡಿ ಹೇಳಿದ್ದಾರೆ. ಈ ಮುನ್ನ 1999 ರಲ್ಲಿ ವಾಯು ವಿಹಾರಾರ್ಥಿಗಳಿಗೆ 2 ರುಪಾಯಿ ಪ್ರವೇಶ ಶುಲ್ಕವನ್ನು ವಿಧಿಸಿದ್ದ ಸರ್ಕಾರ, ಸಾರ್ವಜನಿಕರ ಪ್ರತಿಭಟನೆಯಿಂದ ತನ್ನ ನಿರ್ಧಾರ ಕೈಬಿಟ್ಟದ್ದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋವಾರ್ತೆ)