ಬನ್ನೇರುಘಟ್ಟ ಉದ್ಯಾನಕ್ಕೆ ಮೆರುಗು ನೀಡಲಿವೆ ಸೈಬೀರಿಯ ಹುಲಿಗಳು
ಕೆಂಪು, ಕಂದು, ಬಿಳಿಪಟ್ಟೆ, ಕಪ್ಪು ಪಟ್ಟೆ ಹೀಗೆ ವಿವಿಧ ಬಣ್ಣದ ಏಳು ಸೈಬೀರಿಯಾ ಹುಲಿಗಳು ಅತಿ ಶೀಘ್ರದಲ್ಲೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹುಲಿ ಸಫಾರಿಯನ್ನು ಸೇರುವ ಮೂಲಕ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಲಿವೆ.
ಸರಕಾರೇತರ ಸಂಸ್ಥೆ (ಎನ್.ಜಿ.ಓ) ಯಾಂದು ಯೂರೋಪ್ ಖಂಡದ ವಿವಿಧ ಸರ್ಕಸ್ ಕಂಪನಿಗಳ ಬಂಧನದಿಂದ ಈ ಏಳು ಹುಲಿಗಳನ್ನು ಬಿಡುಗಡೆಗೊಳಿಸಿದ್ದು, ಅದರ ಸಂರಕ್ಷಣೆಗೆ ಹಾಗೂ ಸ್ವಾತಂತ್ರ್ಯ ರಕ್ಷಣೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವೇ ಸೂಕ್ತ ಎಂದು ಪರಿಗಣಿಸಿ, ತನ್ನ ಖರ್ಚಿನಲ್ಲೇ ಹುಲಿಗಳನ್ನು ಇಲ್ಲಿಗೆ ರವಾನಿಸುತ್ತಿದೆ.
ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನದಲ್ಲಿ ಹಾವುಗಳ ಸಫಾರಿ, ಸಿಂಹ ಸಫಾರಿ, ಹುಲಿ ಸಫಾರಿಗಳಿದ್ದು ನಿತ್ಯವೂ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಪ್ರಾಣಿಗಳನ್ನು ವೀಕ್ಷಿಸುತ್ತಾರೆ. ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ನಂತರ ರಾಜ್ಯದಲ್ಲಿ ಅತ್ಯುತ್ತಮ ಮೃಗಾಲಯ ಎನಿಸಿರುವ ಇಲ್ಲಿ ಪ್ರಾಣಿಗಳನ್ನು ಬೋನಿನಲ್ಲಿ ಇಡಲಾಗಿದೆಯಾದರೂ ಅವುಗಳಿಗೆ ಸ್ವಾತಂತ್ರ್ಯವಿದೆ ಎಂದು ಸಂಸ್ಥೆ ಪರಿಗಣಿಸಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಿ. ವಿದ್ಯಾಸಾಗರ್ ತಿಳಿಸಿದ್ದಾರೆ.
ಹುಲಿ ನಿರ್ವಹಣೆಗೆ ನಿಧಿ: ಸರ್ಕಸ್ ಹಿಂಸೆಯಿಂದ ಬಿಡುಗಡೆಗೊಂಡ ಈ ಹುಲಿಗಳಿಗೆ ವಿಮಾನ ಯಾನದ ಯೋಗವೂ ಬಂದಿದೆ. ಅಕ್ಟೋಬರ್ನಲ್ಲಿ ಈ ಹುಲಿಗಳು ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿಯುತ್ತವೆ. ವಿವಿಧ ಸರ್ಕಸ್ ಕಂಪನಿಗಳಿಂದ ರಕ್ಷಿಸಲಾದ ಸುಮಾರು 13 ಸಿಂಹಗಳೂ ಅತಿ ಶೀಘ್ರದಲ್ಲೇ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಬರಲಿವೆ.
ಸೈಬೀರಿಯನ್ ಹುಲಿಗಳು ಭಾರತೀಯ ಹುಲಿಗಳಿಗಿಂತಲೂ ಗಾತ್ರದಲ್ಲಿ ದೊಡ್ಡದಾಗಿದ್ದು, ಬೆಂಗಳೂರಿನ ಹವಾಗುಣಕ್ಕೆ ಹೊಂದಿಕೊಳ್ಳುತ್ತವೆ. ಈ ಹುಲಿಗಳಿಗಾಗಿಯೇ ಏಳು ಎಕರೆ ಪ್ರದೇಶವನ್ನು ಸಜ್ಜುಗೊಳಿಸಲಾಗುತ್ತಿದ್ದು, ಅಲ್ಲಿ ಪ್ರತ್ಯೇಕ ಮನೆಗಳ ನಿರ್ಮಾಣವೂ ನಡೆಯಲಿದೆ. ಹುಲಿಗಳ ನಿರ್ವಹಣೆಗೆ ತಗುಲುವ ವೆಚ್ಚ ಭರಿಸಲು ಸ್ವಯಂ ಸೇವಾ ಸಂಸ್ಥೆಯು 36 ಲಕ್ಷ ರುಪಾಯಿಗಳ ನಿಧಿ ಇಡಲು ಒಪ್ಪಿದೆ ಎಂದು ಅಭಯಾರಣ್ಯದ ನಿರ್ದೇಶಕರೂ ಆದ ವಿದ್ಯಾಸಾಗರ್ ತಿಳಿಸಿದ್ದಾರೆ.
ಈ ಹುಲಿಗಳೊಂದಿಗೆ ಆಗಮಿಸುವ ಪಶು ವೈದ್ಯರು ಒಂದು ತಿಂಗಳ ಕಾಲ ಇಲ್ಲೇ ವಾಸ್ತವ್ಯ ಹೂಡಿ ಸ್ಥಳೀಯ ವೈದ್ಯರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಈ ಹುಲಿಗಳಿಗೆ ವಿಶೇಷ ಸೌಲಭ್ಯ ಹಾಗೂ ಸವಲತ್ತು ಕಲ್ಪಿಸಲು ನಿಧಿಯ ಮೊತ್ತವನ್ನು ದುಪ್ಪಟ್ಟು ಮಾಡುವಂತೆ ಕೋರಲಾಗಿದ್ದು, ಸಂಸ್ಥೆಯಿಂದ ತಾತ್ವಿಕ ಒಪ್ಪಿಗೆ ದೊರೆತಿದೆ.
ರಾಜ್ಯದಲ್ಲಿ ಒಟ್ಟು 370 ಹುಲಿಗಳಿವೆ ಎಂದು ಅಂದಾಜು ಮಾಡಲಾಗಿದೆ. ಈ ಪೈಕಿ ಬನ್ನೇರುಘಟ್ಟದಲ್ಲೇ 21 ಹುಲಿಗಳಿವೆ. ಬಂಡೀಪುರದಲ್ಲಿ ಪ್ರತಿ ನೂರು ಚದರ ಕಿಲೋ ಮೀಟರ್ಗೆ 11 ಹುಲಿಗಳಿವೆ ಎಂಬ ವಿವರಗಳನ್ನೂ ಅವರು ನೀಡಿದ್ದಾರೆ.