‘ವೀರಪ್ಪನ್ ಸಹಿತ ಇಲ್ಲ ಅವನ ಶವದೊಂದಿಗೆ ಕಾಡಿನಿಂದ ಬರುವೆ’
ಬೆಂಗಳೂರು : ಹಲವು ವರ್ಷಗಳಿಂದ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳಿಗೆ ಸವಾಲಾಗಿರುವ ಕಾಡುಗಳ್ಳ ವೀರಪ್ಪನ್ನನ್ನು ಹಿಡಿಯುವ ತನಕ ತಮ್ಮ ಕಾರ್ಯಾಚರಣೆ ನಿಲ್ಲದು ಎಂದು ಎಸ್.ಟಿ.ಎಫ್. ಕಾರ್ಯಪಡೆ ಮುಖ್ಯಸ್ಥ ವಾಲ್ಟರ್ ಥೇವಾರಂ ಸೋಮವಾರ ತಿಳಿಸಿದ್ದಾರೆ.
ವೀರಪ್ಪನ್ ಬಂಧನಕ್ಕೆ ಹೊಸ ಕಾರ್ಯತಂತ್ರಗಳನ್ನು ರೂಪಿಸಲು ಕರ್ನಾಟಕ ಹಾಗೂ ತಮಿಳುನಾಡು ಕಾರ್ಯಪಡೆಯ ಮುಖ್ಯಸ್ಥರೊಂದಿಗೆ ನಡೆದ ಜಂಟಿ ಸಮಾಲೋಚನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಪ್ಪನ್ ಸಹಿತ ಇಲ್ಲವೆ ಅವನ ಶವದೊಂದಿಗೆ ಮಾತ್ರ ತಾವು ಕಾಡಿನಿಂದ ಹೊರ ಬರುವುದಾಗಿ ತಿಳಿಸಿದರು. ಎಸ್.ಟಿ.ಎಫ್. ಹಾಗೂ ಬಿ.ಎಸ್.ಎಫ್ ಯೋಧರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಈ ಬಾರಿ ಖಂಡಿತಾ ಯಶಸ್ವಿಯಾಗೇ ತೀರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮಗಳ ದತ್ತು : ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ನೆರವಾಗುವ ಕಾಡಿನಂಚಿನ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಉಭಯ ಸರಕಾರಗಳೂ ಸಮ್ಮತಿಸಿವೆ. ವೀರಪ್ಪನ್ ಹಾಗೂ ಅವನ ಸಹಚರರ ಬಗ್ಗೆ ಮಾಹಿತಿ ನೀಡುವವರಿಗೆ 25 ಸಾವಿರ, ವೀರಪ್ಪನ್ನನ್ನು ಹಿಡಿದುಕೊಟ್ಟವರಿಗೆ 25 ಲಕ್ಷ ಬಹುಮಾನ ಘೋಷಿಸಲಾಗಿದೆ ಎಂದೂ ಥೇವಾರಂ ಹೇಳಿದರು.
ಈಗಾಗಲೇ ಕರ್ನಾಟಕದ ಕಾರ್ಯಪಡೆ ಅಧಿಕಾರಿ ಕೆಂಪಯ್ಯ, ತಮಿಳುನಾಡು ಅಧಿಕಾರಿ ವಿಜಯಕುಮಾರ್ ಸೇರಿದಂತೆ ಕಾರ್ಯಪಡೆಯ ಸಿಬ್ಬಂದಿ ಸುಮಾರು 240ಕ್ಕೂ ಹೆಚ್ಚು ಗ್ರಾಮಗಳ ಜನರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಾರಿಯ ಕಾರ್ಯಾಚರಣೆ ವ್ಯವಸ್ಥಿತವೂ, ಸುಸಜ್ಜಿತವೂ ಆಗಿದ್ದು, ನಾವು ನರಹಂತಕನ ಹಿಡಿದೇ ತೀರುತ್ತೇವೆ ಎಂದು ಅವರು ಹೇಳಿದರು.
ಆಕ್ಷೇಪ : ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಹಿರಿಯ ಅಧಿಕಾರಿಗಳನ್ನು ಮನಸೋಇಚ್ಛೆ ವರ್ಗ ಮಾಡಿದ್ದರಿಂದಲೇ ಕಾರ್ಯಾಚರಣೆಗೆ ಹಿನ್ನಡೆ ಉಂಟಾಯಿತು ಎಂದ ಥೇವಾರಂ, ಎರಡೂ ಸರಕಾರಗಳ ರಾಜಕೀಯ ಕಾರಣಗಳಿಂದಾಗಿಯೇ ಕಾರ್ಯಾಚರಣೆಗೆ ಹಿನ್ನಡೆಯುಂಟಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಮುಖಪುಟ / ವೀರಪ್ಪನ್ ಶಿಕಾರಿ