ಮಂಗಳೂರು ಸಂಧ್ಯಾ ಕಾಲೇಜಿಗೆ ಬೀಗ, ಜ್ಞಾನಾಸಕ್ತರ ಬಯಕೆಗೆ ಕಲ್ಲು
ಮಂಗಳೂರು : ‘ಸಂಧ್ಯಾ ಕಾಲೇಜು’ ಮುಚ್ಚಿರುವುದರಿಂದ ಮಂಗಳೂರು ಮತ್ತು ಸುತ್ತ ಮುತ್ತ ಲಿನ ಜ್ಞಾನಾಸಕ್ತರ ಉದ್ಯೋಗದೊಂದಿಗೆ ಕಲಿಕೆಯನ್ನೂ ಮುಂದುವರೆಸುವ ಬಯಕೆಗೆ ಕಲ್ಲುಬಿದ್ದಿದೆ.
ನಗರದಲ್ಲಿನ ಎರಡು ಪ್ರಭಾವೀ ಸಂಜೆ ಕಾಲೇಜುಗಳಾದ ಬೆಸಂಟ್ ಮತ್ತು ಅಲೋಶಿಯಸ್ನಲ್ಲಿ ಕಲಿತು ಮುಂದೆ ಬಂದ ವಿದ್ಯಾರ್ಥಿಗಳ ಸಂಖ್ಯೆ ಅನೇಕ. ಅಲ್ಲದೆ ಮಂಗಳೂರಿನಲ್ಲಿ ಸಂಜೆ ಕಾಲೇಜುಗಳಿಗೆ ವಿದ್ಯಾರ್ಥಿಗಳ ಕೊರತೆ ಎದುರಾಗುವುದಿಲ್ಲ. ಈಗ ಏಕಾಏಕಿ ಸಂಜೆ ಕಾಲೇಜುಗಳಿಗೆ ಬೀಗ ಬಿದ್ದಿರುವುದರಿಂದ ಪೆಟ್ಟು ಬಿದ್ದಿರುವುದು ಬಡ ವಿದ್ಯಾರ್ಥಿಗಳಿಗೆ. ಕಷ್ಟಪಟ್ಟು ಪ್ರೌಢ ಶಾಲೆ ಅಥವಾ ಪದವಿ ಪೂರ್ವ ಕಾಲೇಜಿನಿಂದ ಆಚೆಗೆ ಬಂದವರು ಎಲ್ಲಾದ ರೂ ಪುಟ್ಟ ಉದ್ಯೋಗವನ್ನು ಹಿಡಿದುಕೊಂಡು ಮತ್ತೆ ವಿದ್ಯಾಬ್ಯಾಸ ಮುಂದುವರೆಸುತ್ತಾರೆ. ಇನ್ನು ಮೇಲೆ ಈ ಕನಸಿಗೆ ಜಾಗವಿಲ್ಲ.
ಹಗಲು ಉದ್ಯೋಗ, ಸಂಜೆ ಕಲಿಕೆ ಮಾಡಬಹುದು ಎಂದುಕೊಂಡಿದ್ದ ನಮಗೀಗ ಪರ್ಯಾಯ ದಾರಿಯಿಲ್ಲದಂತಾಗಿದೆ ಎಂದು ಮಂಗಳೂರು ಮಠದ ಕಣಿಯ ರಾಮಕೃಷ್ಣ ಬೇಜಾರು ಮಾಡಿಕೊಳ್ಳುತ್ತಾರೆ. ಸಂಜೆ ಕಾಲೇಜುಗಳನ್ನು ಮುಚ್ಚುವ ಸರಕಾರದ ನಿರ್ಧಾರ ಅತ್ಯಂತ ಕಠೋರವಾದದ್ದು ಎನ್ನುತ್ತಾರೆ ಸಂಧ್ಯಾ ಕಾಲೇಜಿನಲ್ಲಿ ಕಲಿತು ಈಗ ಉದ್ಯೋಗದಲ್ಲಿರುವ ಅಶ್ರಫ್.
ಪ್ರಸ್ತುತ, ವಿದ್ಯಾರ್ಥಿಗಳು ‘ಸಂಧ್ಯಾ ಕಾಲೇಜು ಉಳಿಸಿ ಸಮಿತಿ’ ರಚಿಸಿಕೊಂಡು ಹೋರಾಟಕ್ಕೆ ಇಳಿದಿದ್ದಾರೆ. ಒಂದು ವಾರದಿಂದ ಈ ಹೋರಾಟ ನಡೆಯುತ್ತಿದೆ. ಜೂನ್ 29ರಂದು ಸರ್ವಕಾಲೇಜು ಬಂದ್ಗೂ ಸಿದ್ಧತೆ ನಡೆದಿದೆ.
ಮಂಗಳೂರು ವಿಶ್ವ ವಿದ್ಯಾಲಯ ಶಿಕ್ಷಕರ ಸಂಘಟನೆ ಅಮುಕ್ತ್ ಕೂಡ ಸಂಧ್ಯಾ ಕಾಲೇಜು ಮುಚ್ಚಿರುವುದನ್ನು ವಿರೋಧಿಸುತ್ತಿದೆ.
(ಮಂಗಳೂರು ಪ್ರತಿನಿಧಿಯಿಂದ)