ಬೆಂಗಳೂರಿಗರೇ- ಸಿಗ್ನಲ್ ಮೀರಿದಿರೋ, ಮನೆಗೇ ನೋಟಿಸು
ಬೆಂಗಳೂರು : ಜುಲೈ ತಿಂಗಳ ಮೊದಲ ವಾರದಿಂದ ನೀವು ಟ್ರಾಫಿಕ್ ಸಿಗ್ನಲ್ ಮೀರಿ ಗಾಡಿ ಓಡಿಸಿದರೆ ಪೊಲೀಸರು ನಿಮ್ಮ ಬೆನ್ನುಹತ್ತುವುದಿಲ್ಲ. ಅದೇ ದಿನ ಸಂಜೆ ಮನೆಯಲ್ಲಿ ದಂಡದ ಚೀಟಿ ನಿಮಗಾಗಿ ಕಾಯುತ್ತಿರುತ್ತದೆ !
ಪೊಲೀಸ್ ಕಮಿಷನರ್ ಟಿ.ಮಡಿಯಾಳ್ ಅವರ ಹೊಸ ಯೋಜನೆಯಿದು. ನಗರದ 1500 ಟ್ರಾಫಿಕ್ ಪೊಲೀಸರು ಮೈಯೆಲ್ಲಾ ಕಣ್ಣಾಗಿ ಕಾಯುತ್ತಿರುತ್ತಾರೆ. ಕೆಂಪು ದೀಪ ಮೀರಿ ಗಾಡಿ ಬಿಟ್ಟರೋ, ನಿಮ್ಮ ಗಾಡಿಯ ನಂಬರು ಪೊಲೀಸರ ಪುಟ್ಟ ಪುಸ್ತಕದಲ್ಲಿ ದಾಖಲು. ದಂಡದ ನೋಟೀಸನ್ನು ಅಂದೇ ಸಂಜೆ ಹೊತ್ತಿಗೆ ಮನೆಗೆ ರವಾನಿಸಿರುತ್ತಾರೆ. ನಿಮ್ಮ ವಾಹನವನ್ನು ನೋಂದಾಯಿಸಿರುವ ಆರ್ಟಿಓ ಕಚೇರಿ ನಿಮ್ಮ ವಿಳಾಸವನ್ನು ಒದಗಿಸುತ್ತದೆ. ಮೊದಲ ಬಾರಿ ಸಣ್ಣ ಪ್ರಮಾಣದ ದಂಡ. ಎರಡು, ಮೂರು, ನಾಲ್ಕನೇ ಬಾರಿಯೂ ಅದೇ ರೀತಿ ನೀವು ವರ್ತಿಸಿದರೆ ದಂಡ ಏರುತ್ತದೆ. ಮೊಂಡು ಬಿಡದೆ, ಐದು- ಆರನೇ ಬಾರಿಯೂ ನಿಮ್ಮ ಚಾಳಿ ಮುಂದುವರೆದರೆ ಲೈಸನ್ಸೇ ರದ್ದಾಗಲಿದೆ ಎಚ್ಚರ.
ಕಳೆದ ಎರಡು ದಶಕಗಳಲ್ಲಿ ವಿದೇಶೀಯರೂ ಸೇರಿದಂತೆ ನಡೆಸಿರುವ ಸಮೀಕ್ಷೆ ಪ್ರಕಾರ ಬೆಂಗಳೂರು ಗೊಂದಲನಗರಿ, ಟ್ರಾಫಿಕ್ಕು ಇಲ್ಲಿ ದೊಡ್ಡ ಕಿರಿಕಿರಿ. ಇದನ್ನು ತಪ್ಪಿಸಲು ಎಲ್ಲಾ ವಾಹನ ಓಡಿಸುವವರಲ್ಲಿ ಶಿಸ್ತು ತರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಹೊಸ ಯೋಜನೆ ಜಾರಿಗೆ ತರಲಿದ್ದೇವೆ ಎಂದು ಮಡಿಯಾಳ್ ಆಂಗ್ಲ ಪತ್ರಿಕೆಯಾಂದಕ್ಕೆ ತಿಳಿಸಿದ್ದಾರೆ.
ದಂಡ ಕಟ್ಟದಿದ್ದರೆ ಏನು ಮಾಡಿಯಾರು ಅಂತ ಮೊಂಡುಬಿದ್ದೀರಾ, ಜೋಕೆ ! ಮಡಿಯಾಳ್ ಖಡಕ್ಕಾಗಿದ್ದಾರೆ.
(ಇನ್ಫೋ ವಾರ್ತೆ)