ಕೊಡವ ಮತ್ತು ಉರ್ದು ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ನೇಮಕ
ಬೆಂಗಳೂರು : ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿಗೆ ಪ್ರೊ. ಅಬ್ದುಲ್ ವಹಾಬ್ ಅಂದಲೀಪ ಮತ್ತು ಕೊಡವ ಸಾಹಿತ್ಯ ಅಕಾಡೆಮಿಗೆ ಬಾಚರಣೆಯಂಡ ಅಪ್ಪಣ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವೆ ಮೂರು ವರ್ಷಗಳ ಅವಧಿಗೆ ಸದಸ್ಯರನ್ನೂ ನೇಮಕ ಮಾಡಲಾಗಿದೆ ಎಂದರು. ಕೊಡವ ಅಕಾಡೆಮಿ ಅಧ್ಯಕ್ಷರಾಗಿರುವ ಬಾಚರಣೆಯಂಡ ಅಪ್ಪಣ್ಣ ಅವರು ಕೊಡಗು ವಿಮೋಚನಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದರಿಂದ ರಾಜ್ಯದ ಸಮಗ್ರತೆಗೆ ಧಕ್ಕೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಸಿದ ಸಚಿವೆ ಅಪ್ಪಣ್ಣ ಅವರು ಈಗ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಉರ್ದು ಅಕಾಡೆಮಿ ಅಧ್ಯಕ್ಷರಾಗಿರುವ ಅಬ್ದುಲ್ ವಹಾಬ್ ಮೂಲತಃ ಗುಲ್ಬರ್ಗದವರು. ತಮ್ಮ ಅವಧಿಯಲ್ಲಿ ಉರ್ದು ಮತ್ತು ಕನ್ನಡ ಭಾಷೆಯಲ್ಲಿನ ಅತ್ಯುತ್ತಮ ಸಾಹಿತ್ಯ ಕೃತಿಗಳ ಪರಸ್ಪರ ಅನುವಾದ ಕಾರ್ಯದತ್ತ ಹೆಚ್ಚಿನ ಗಮನ ಕೊಡುವುದಾಗಿ ಹೇಳಿದರು. ಅಲ್ಲದೆ ಉರ್ದು ಮಾದ್ಯಮ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಹೆಚ್ಚಿಸಬೇಕು ಮತ್ತು 3 ನೇ ತರಗತಿಯಿಂದಲೇ ಕನ್ನಡ ಕಲಿಕೆ ಕಡ್ಡಾಯ ಮಾಡಬೇಕು. ಇದರಿಂದ ಕನ್ನಡ ಮತ್ತು ಉರ್ದು ಭಾಷಾ ಬಾಂಧವ್ಯ ಬಿಗಿಯಾಗುತ್ತದೆ ಎಂದು ವಹಾಬ್ ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)