ಸಂಜಯಗಾಂಧಿ ಆಸ್ಪತ್ರೆಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ಘಟಕ
ಬೆಂಗಳೂರು : ಜನವರಿ 26ರ ಗಣರಾಜ್ಯೋತ್ಸವದ ದಿನ ಸಂಭವಿಸಿದ ಭೀಕರ ಭೂಕಂಪದ ನಂತರ ಎಲ್ಲ ರಾಜ್ಯಗಳೂ ಪ್ರಕೃತಿ ವಿಕೋಪ ನಿರ್ವಹಣೆ ಘಟಕದ ಮಹತ್ವವನ್ನು ಕುರಿತು ಚರ್ಚಿಸಿದವು. ಕರ್ನಾಟಕ ರಾಜ್ಯhttp://www.karnatakadisaster.com ಎಂಬ ವೆಬ್ಸೈಟ್ ಆರಂಭಿಸಿದ್ದಲ್ಲದೆ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಯಂ ಪ್ರಕೃತಿ ವಿಕೋಪ ನಿರ್ವಹಣೆ ಸಮಿತಿಗೂ ಚಾಲನೆ ನೀಡಿತ್ತು.
ಈಗ ರಾಜ್ಯದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಸಂಜಯಗಾಂಧೀ ಆಸ್ಪತ್ರೆಯ ಅಪಘಾತ ವಿಭಾಗ ಹಾಗೂ ಸಂಶೋಧನಾ ಕೇಂದ್ರದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ಘಟಕ ತೆರೆಯಲು ನಿರ್ಧರಿಸಲಾಗಿದೆ.
ಪೀಣ್ಯದ ರೋಟರಿ ಸಂಸ್ಥೆ ಶುಕ್ರವಾರ ಆಸ್ಪತ್ರೆಗೆ ಗಾಲಿ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ನಿರ್ದೇಶಕ ಡಾ. ಬಿ. ಸದಾಶಿವ ಮೂರ್ತಿ ಈ ವಿಷಯ ತಿಳಿಸಿದರು. ಇತ್ತೀಚೆಗೆ ಗುಜರಾತ್ನ ಭುಜ್ಗೆ ಭೇಟಿ ನೀಡಿದ್ದ ಕರ್ನಾಟಕದ ತಂಡ ನೀಡಿದ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಕೃತಿ ವಿಕೋಪ ಸಂಭವಿಸಿದಾಗ ತುರ್ತು ಕ್ರಮ ಕೈಗೊಳ್ಳಲು ಮತ್ತು ನೊಂದವರಿಗೆ ಪರಿಹಾರ ಒದಗಿಸಲು ಇಂತಹ ಘಟಕಗಳ ಅಗತ್ಯ ಇದೆ ಎಂದು ಅವರು ಹೇಳಿದರು. ಈ ಘಟಕದಲ್ಲಿ ಸೇವೆ ಸಲ್ಲಿಸ ಬಯಸುವ ಸ್ವಯಂ ಸೇವಕರು ಆಸ್ಪತ್ರೆಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬಹುದು ಎಂದೂ ಅವರು ಹೇಳಿದರು.
ಹೆಚ್ಚಿನ ವಿವರಗಳನ್ನು 6562822, 6564178, 6567175, 6564516, 6562500 ದೂರವಾಣಿ ಸಂಖ್ಯೆಗಳ ಮೂಲಕ ಆಸ್ಪತ್ರೆಯ ನಿರ್ದೇಶಕರು, ವೈದ್ಯಾಧಿಕಾರಿಗಳು ಇಲ್ಲವೆ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬಹುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ರೋಟರಿ ಕ್ಲಬ್ ಅಧ್ಯಕ್ಷ ಎ. ಸುರೇಶ್ ಅವರು ಮಾತನಾಡಿ, ತಮ್ಮ ಸಂಸ್ಥೆಯು ಅಂಗವಿಕಲರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಜೂನ್ 25ರಂದು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 200 ಅಂಗವಿಕಲರಿಗೆ ಗಾಲಿಕುರ್ಚಿ, ತ್ರಿಚಕ್ರವಾಹನಗಳನ್ನು ವಿತರಿಸಲಿದೆ ಎಂದರು.
ಮುಖಪುಟ / ಇವತ್ತು... ಈ ಹೊತ್ತು...