ನೀರಾದ ಆಯುಸ್ಸು 6 ತಿಂಗಳು -‘ಸಿಎಫ್ಟಿಆರ್ಐ’ ವರದಿ
ಹಾಸನ : ನುಸಿರೋಗ ತಡೆಗಟ್ಟಲು ತೆಂಗಿನಮರದಿಂದ ರೈತರು ಇಳಿಸುವ ನೀರಾವನ್ನು ಆರು ತಿಂಗಳ ಕಾಲ ಕೆಡದಂತೆ ಇಡಬಹುದು ಎಂದು ಮೈಸೂರಿನ ‘ಸಿಎಫ್ಟಿಆರ್ಐ’ ತನ್ನ ವೈಜ್ಞಾನಿಕ ವರದಿಯಲ್ಲಿ ತಿಳಿಸಿದೆ.
ಇದರಿಂದ ವೈಜ್ಞಾನಿಕವಾಗಿ ನೀರಾದಿಂದ ಯಾವುದೇ ತೊಂದರೆ ಇಲ್ಲವೆಂದಾದರೆ ನೀರಾ ಇಳಿಸಲು ಅನುಮತಿ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಕೃಷ್ಣ ಅವರ ಭರವಸೆಯ ಮಾತುಗಳ ಬಗ್ಗೆ ರೈತರಲ್ಲಿ ನಂಬಿಕೆ ಹೆಚ್ಚಿದೆ. ಈ ವಿಷಯವನ್ನು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ಚಂದ್ರಶೇಖರ್ ಗುರುವಾರ ಪತ್ರಕರ್ತರಿಗೆ ತಿಳಿಸಿದ್ದು, ಸಿಎಫ್ಟಿಆರ್ಐ ವರದಿ ರೈತರ ಪಾಲಿಗೆ ಆಶಾದಾಯಕವಾಗಿದೆ ಎಂದರು.
ರಾಜ್ಯದ 13 ಜಿಲ್ಲೆಗಳಲ್ಲಿ ಲಕ್ಷಾಂತರ ಜನರ ಬದುಕು ತೆಂಗಿನಮರವನ್ನು ಅವಲಂಬಿಸಿದೆ. ನುಸಿರೋಗದಿಂದಾಗಿ ಕುಂಠಿತವಾದ ಇಳುವರಿ ಹಾಗೂ ವಿಶ್ವ ಮಾರುಕಟ್ಟೆಯ ಪರಿಣಾಮದಿಂದಾಗಿ ಕುಸಿದಿರುವ ರೈತರಿಗೆ ನೀರಾವೊಂದೇ ಗತಿ ಎಂದು ಚಂದ್ರಶೇಖರ್ ವಿವರಿಸಿದರು. ಇನ್ನಾದರೂ ಸರಕಾರ ಅಬ್ಕಾರಿ ಇಲಾಖೆ ಲಾಬಿಗೆ ಮಣಿಯುವುದನ್ನು ನಿಲ್ಲಿಸಬೇಕು. ನೀರಾ ಮಡಕೆಗಳನ್ನು ಹಾಳುಗೆಡವುವ ಅಬ್ಕಾರಿ ಸಿಬ್ಬಂದಿ ಕಾರ್ಯಾಚಾರಣೆಯನ್ನು ನಿಲ್ಲಿಸಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿಕೊಂಡರು.
(ಇನ್ಫೋ ವಾರ್ತೆ)