‘ಶಂಕರಾಭರಣಂ’ ನಾದಾಮೃತಧಾರೆಯ ಮಹಾದೇವನ್ ನಿಧನ
ಚೆನ್ನೆ: ದಕ್ಷಿಣ ಭಾರತ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಕೆ.ವಿ. ಮಹಾದೇವನ್ ಗುರುವಾರ ಚೆನ್ನೈನ ಖಾಸಗಿ ಆಸ್ಪತ್ರೆಯಾಂದರಲ್ಲಿ ನಿಧನರಾದರು. 83 ವರ್ಷದ ಮೃತರು ಪತ್ನಿ , ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.
ಕೃಷ್ಣರುಕ್ಮಿಣಿ, ಗುರು ಶಿಷ್ಯರು ಹಾಗೂ ಪ್ರಚಂಡ ಕುಳ್ಳ ಸಿನಿಮಾಗಳಿಗೆ ಸಂಗೀತ ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲೂ ಪರಿಚಿತರಾಗಿದ್ದ ಮಹಾದೇವನ್ ಕರ್ಣಾನಂದಕರ ಸಂಗೀತಕ್ಕೆ ಮತ್ತೊಂದು ಹೆಸರು. ಪ್ರಸಿದ್ಧ ನಿರ್ದೇಶಕ ಕೆ. ವಿಶ್ವನಾಥ್ ಹಾಗೂ ಮಹಾದೇವನ್ ಅವರ ಜೋಡಿ ಹೆಸರು ಪಡೆದಿದ್ದು , ಇದೇ ಜೋಡಿಯ ಶಂಕರಾಭರಣಂ ತೆಲುಗು ಸಿನಿಮಾದ ಸಂಗೀತಕ್ಕಾಗಿ ಮಹಾದೇವನ್ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದರು.
ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ 1500 ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಸಂಗೀತ ನೀಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಮಹಾದೇವನ್ ಚಿತ್ರೋದ್ಯಮ ಪ್ರವೇಶಿಸಿದ್ದು ನಿರ್ಮಾಪಕರಾಗಿ. ‘ಅಲ್ಲಿ ಪೆಟ್ರ ಪಿಳ್ಳೈ’ ತಮಿಳು ಸಿನಿಮಾ ನಿರ್ಮಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ಅಗ್ನಿಪ್ರಾಣ ಮಹಿಮೈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು. ನಂತರದ್ದು ಯಶಸ್ಸಿನ ಕಥೆ.
ಮಹಾದೇವನ್ ಅವರ ನಿಧನಕ್ಕೆ ಅತೀವ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ವಾಜಪೇಯಿ, ಸಂಗೀತ ನಿರ್ದೇಶಕರಾಗಿ ಅವರು ಹರಿಸಿರುವ ನಾದಸುಧೆ ಭಾರತೀಯ ಚಿತ್ರರಂಗದಲ್ಲಿ ಬಹುಕಾಲ ಉಳಿಯುತ್ತದೆ ಎಂದು ಬಣ್ಣಿಸಿದ್ದಾರೆ.
(ಇನ್ಫೋ ವಾರ್ತೆ)