ವರದಕ್ಷಿಣೆ ಪ್ರಕರಣಗಳ ತನಿಖೆಗೆ ಜಿಲ್ಲಾಮಟ್ಟದ ಘಟಕ : ಹೈಕೋರ್ಟ್
ಬೆಂಗಳೂರು : ವರದಕ್ಷಿಣೆ ನಿಷೇಧ ಕಾನೂನಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ತನಿಖೆಗಾಗಿ ಜಿಲ್ಲಾ ಮಟ್ಟದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಘಟಕಗಳನ್ನು ರಚಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ವರದಕ್ಷಿಣೆ ಸಾವು ಮೊದಲಾದ ಪ್ರಕರಣಗಳ ಬಗೆಗೆ ಪ್ರಸ್ತುತ ನಡೆಯುತ್ತಿರುವ ತನಿಖಾ ವಿಧಾನದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ವಿಭಾಗೀಯ ಪೀಠ, ಹತ್ಯೆಗೊಳಗಾಗುವ ಯುವತಿಯರ ಪರವಾಗಿ ಸಮರ್ಥವಾಗಿ ವಾದಿಸಬಲ್ಲ ವಕೀಲರನ್ನು ನಿಯೋಜಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿತು.
ನ್ಯಾಯಮೂರ್ತಿ ಎಂ.ಎಫ್.ಸಲ್ಡಾನ ಮತ್ತು ನ್ಯಾಯಮೂರ್ತಿ ಕೆ.ಆರ್.ಪ್ರಸಾದ್ ರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠ ಗುರುವಾರ ಈ ಆದೇಶ ಹೊರಡಿಸಿತು. ಹೊಸದಾಗಿ ಮದುವೆಯಾಗಿದ್ದ ಯುವತಿಯಾಬ್ಬಳನ್ನು ಸೀಮೆಎಣ್ಣೆ ಸುರಿದು ಕೊಂದ ಆಕೆಯ ಪತಿ ಹಾಗೂ ಕುಟುಂಬದ ಇತರರನ್ನು ಸಾಕಷ್ಟು ಸಾಕ್ಷ್ಯಾಧಾರಗಳು ಸಾಲದು ಎಂಬ ಕಾರಣಕ್ಕೆ ಕೆಳ ನ್ಯಾಯಾಲಯ ಖುಲಾಸೆ ಮಾಡಿತ್ತು.
ಈ ಕಾರಣಕ್ಕೆ ರಾಜ್ಯ ಸರ್ಕಾರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ಕೆಳ ಕೋರ್ಟಿನ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿಯುವುದರ ಜೊತೆಗೆ ಈ ಆದೇಶ ನೀಡಿತು. ಕರ್ನಾಟಕದಲ್ಲಿ ನವ ವಿವಾಹಿತ ಯುವತಿಯರ ವರದಕ್ಷಿಣೆ ಸಾವು ಹೆಚ್ಚುತ್ತಿದೆ. ಪ್ರತಿಶತ 97.5 ರಷ್ಟು ವರದಕ್ಷಿಣೆ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆ ಆಗುತ್ತಿದ್ದಾರೆ. ಕಾಯ್ದೆಗೆ ಏನೇ ತಿದ್ದುಪಡಿ ತಂದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಸಮರ್ಥ ಅಧಿಕಾರಗಳ ಘಟಕಗಳನ್ನು ರಚಿಸಿ, ತನಿಖೆಗೆ ಅರ್ಥ ಕೊಡಬೇಕು ಎಂದು ವಿಭಾಗೀಯ ಪೀಠ ಸರ್ಕಾರಕ್ಕೆ ಆದೇಶಿಸಿತು.
(ಇನ್ಫೋ ವಾರ್ತೆ)