ಜಗಜ್ಯೋತಿ ಬಸವೇಶ್ವರ ವಿ.ವಿ. : ರಾಜ್ಯ ಸರಕಾರದ ಪರಿಶೀಲನೆ
ಬೆಂಗಳೂರು : 12ನೇ ಶತಮಾನದ ಸಾಮಾಜಿಕ ಹಾಗೂ ವೈಚಾರಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಅವರ ಐಕ್ಯಸ್ಥಳದಲ್ಲಿ ಹೊಸ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವ ಪ್ರಸ್ತಾವ ಸರಕಾರದ ಮುಂದಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಕಾಶಪ್ಪನವರ್ ಶುಕ್ರವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಸಬೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು ಈ ವಿಷಯ ತಿಳಿಸಿದ್ದಾರೆ. ಅನಕ್ಷರಸ್ಥರನ್ನು ಸಂಘಟಿಸಿ, ಕನ್ನಡವನ್ನು ಅಂದೇ ಧರ್ಮದ ಭಾಷೆಯಾಗಿ ಬಳಸಿಕೊಂಡು ಕ್ರಾಂತಿ ಮಾಡಿದ ಬಸವಣ್ಣನವರ ತತ್ವ, ಸಿದ್ಧಾಂತಗಳು ಆಚರಣೆಗೆ ತಂದ ಸಾಮಾಜಿಕ ಬದಲಾವಣೆಗಳ ಬಗ್ಗೆ ಹಾಗೂ ವಚನ ಸಾಹಿತ್ಯದ ಬಗ್ಗೆ ಆಮೂಲಾಗ್ರವಾಗಿ ಅಧ್ಯಯನ ನಡೆಸಲೆಂದೇ ಹೊಸ ವಿಶ್ವವಿದ್ಯಾಲಯ ಆರಂಭಿಸುವ ಅಗತ್ಯವಿದೆ ಎಂಬ ಅಂಶ ಸಭೆಯಲ್ಲಿ ಚರ್ಚೆಗೆ ಬಂದಿತೆಂದು ಅವರು ತಿಳಿಸಿದರು.
ಬಸವನಬಾಗೇವಾಡಿ, ಬಸವಕಲ್ಯಾಣ, ಇಂಗಳೇಶ್ವರ ಪ್ರದೇಶ ಅಭಿವೃದ್ಧಿಗೆ ರಾಜ್ಯ ಸರ್ಕಾರ 70 ಕೋಟಿ ರುಪಾಯಿ ಬಿಡುಗಡೆ ಮಾಡಿದೆ ಎಂದ ಅವರು ಕೂಡಲ ಸಂಗಮದಲ್ಲಿ ವಿದ್ಯಾರ್ಥಿ ನಿಲಯ, ಅತಿಥಿಗೃಹ ನಿರ್ಮಿಸಲಾಗಿದೆ. ಮುಖ್ಯಮಂತ್ರಿಗಳು ಈ ಅತಿಥಿಗೃಹವನ್ನು ಉದ್ಘಾಟಿಸುವರು ಎಂದು ಅವರು ಹೇಳಿದರು.
ಪುನಾರಚನೆ : ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೂಡಲ ಸಂಗಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಂಬಂಧ ಚರ್ಚೆ ನಡೆಸಲಾಯಿತು. ಪ್ರಸ್ತುತ ಅಸ್ಥಿತ್ವದಲ್ಲಿರುವ ಪ್ರಾಧಿಕಾರವನ್ನು ಪುನಾರಚಿಸುವ ಬಗ್ಗೆಯೂ ಚರ್ಚಿಸಲಾಯಿತು ಎಂದು ಸಭೆಯ ಬಳಿಕ ಕನ್ನಡ ಸಂಸ್ಕೃತಿ ಸಚಿವೆ ರಾಣಿ ಸತೀಶ್ ತಿಳಿಸಿದರು.
ಕೂಡಲಸಂಗಮಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರವೇಶ ಶುಲ್ಕ ವಿಧಿಸುವ ಸಂಬಂಧ ಕೂಡ ಚರ್ಚಿಸಲಾಯಿತು. ಕೂಡಲ ಸಂಗಮದ ಅಭಿವೃದ್ಧಿಗೆ 476 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳಿಗೆ ಕೂಡ ಶುಲ್ಕ ವಿಧಿಸಿ, ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಮಳಿಗೆ ಹಾಗೂ ಭೋಜನಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಸಮಾಲೋಚನೆ ನಡೆಸಲಾಯಿತು.(ಇನ್ಫೋ ವಾರ್ತೆ)