ಹೊಗೆಯುಗುಳುವ, ಸದ್ದು ಮಾಡುವ ವಾಹನಗಳ ಕತೆ ಗೋವಿಂದ!
ಬೆಂಗಳೂರು : ಶಬ್ದ ಹಾಗೂ ವಾಯು ಮಾಲಿನ್ಯ ಮಾಡುವ ವಾಹನಗಳಿಗಿನ್ನು ಉಳಿಗಾಲವಿಲ್ಲ. ಇಂಥಾ ವಾಹನಗಳಿಗೆ ನೋಂದಾವಣೆ, ವರ್ಗಾವಣೆ ಮೊದಲಾದ ಪ್ರಮಾಣ ಪತ್ರಗಳನ್ನು ನೀಡಕೂಡದೆಂದು ಕರ್ನಾಟಕ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಸಂಚಾರಿ ಹಾಗೂ ಪೊಲೀಸ್ ಇಲಾಖೆಗಳಿಗೆ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಪಿ.ವಿ.ರೆಡ್ಡಿ ಹಾಗೂ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಬುಧವಾರ ಈ ಆದೇಶ ಹೊರಡಿಸಿದೆ. ಹೊಗೆ ಕಾರುವ ಹಾಗೂ ಸದ್ದು ಮಾಡುವ ವಾಹನಗಳು ರಸ್ತೆಯಲ್ಲಿ ಸಂಚರಿಸುವುದನ್ನು ಸಂಬಂಧಿಸಿದ ಆಡಳಿತ ತಡೆಯಬೇಕೆಂದು ಬಿ.ಕೃಷ್ಣ ಭಟ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನಂತರ, ಪೀಠ ಈ ಆದೇಶ ಹೊರಡಿಸಿತು.
ಸಂಚಾರಿ ಪ್ರಾಧಿಕಾರ ಪೂರ್ಣ ಪ್ರಮಾಣದಲ್ಲಿ ವಾಹನಗಳನ್ನು ಪರಿಶೀಲಿಸಿ, ಅವು ಪರಿಸರ ಹಾಗೂ ಶಬ್ದ ಮಾಲಿನ್ಯಕ್ಕೆ ಕಾರಣವಾಗುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿದ ನಂತರವೇ ನೋಂದಾವಣೆ, ನವೀಕರಣ, ಫಿಟ್ನೆಸ್ ಮೊದಲಾದ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ಆದೇಶದಲ್ಲಿ ತಾಕೀತು ಮಾಡಲಾಗಿದೆ. ಅತಿಯಾಗಿ ಸದ್ದು ಮಾಡುವ ಹಾರ್ನ್ಗಳನ್ನು ಅಳವಡಿಸುವಂತಿಲ್ಲ. ಸೈಲೆನ್ಸರ್ ಬದಲಾಗಿದೆಯೇ, ಅತಿಯಾಗಿ ಹೊಗೆ ಕಾರುತ್ತದೆಯೇ ಎಂಬುದನ್ನು ಸರಿಯಾಗಿ ಪರಿಶೀಸಬೇಕು ಎಂದು ಮಧ್ಯಂತರ ಆದೇಶ ತಿಳಿಸಿದೆ.
(ಇನ್ಫೋ ವಾರ್ತೆ)