ಜೂ.21ರಿಂದ ವಾಲ್ಟರ್ ಥೇವಾರಂ ನೇತೃತ್ವದಲ್ಲಿವೀರಪ್ಪನ್ ಶಿಕಾರಿ
ಬೆಂಗಳೂರು : ಕಾಡುಗಳ್ಳ ವೀರಪ್ಪನ್ ಶಿಕಾರಿ ಗುರುವಾರದಿಂದ ಸಮರೋಪಾದಿಯಲ್ಲಿ ನಡೆಯಲಿದೆ. ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ಹೊಸ ಕಾರ್ಯಪಡೆ ಹಾಗೂ ಕಾರ್ಯತಂತ್ರ ರೂಪಿಸಿದ್ದು, ತಮಿಳುನಾಡಿನ ವಾಲ್ಟರ್ ಥೇವಾರಂ ನೇತೃತ್ವದಲ್ಲಿ ಗುರುವಾರ ಕಾರ್ಯಾಚರಣೆ ತೀವ್ರಗೊಳ್ಳಲಿದೆ.
ಕಾಡುಗಳ್ಳನನ್ನು ಬಂಧಿಸಲು ಜಂಟಿ ಕಾರ್ಯಪಡೆಯ ಯೋಧರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ ಎಂದು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಡಾ. ಕೆ. ಶ್ರೀನಿವಾಸನ್ ತಿಳಿಸಿದ್ದಾರೆ.
ಚೆನ್ನೈವರದಿ: ಈ ಮಧ್ಯೆ ಜಂಟಿ ಕಾರ್ಯಪಡೆಯ ಮುಖ್ಯಸ್ಥರಾಗಿರುವ ವಾಲ್ಟರ್ ಥೇವಾರಂ ಬುಧವಾರ ಬೆಳಗ್ಗೆ ಚೆನ್ನೈನಿಂದ ಕೊಯಮತ್ತೂರಿಗೆ ತೆರಳಿದ್ದು, ತಮಿಳುನಾಡು ಎಸ್.ಟಿ.ಎಫ್. ಮುಖ್ಯಸ್ಥ ವಿಜಯಕುಮಾರ್ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಉನ್ನತ ಪೊಲೀಸ್ ಅಧಿಕಾರಿಗಳ ಮಟ್ಟದ ಚರ್ಚೆಯಲ್ಲಿ ಕೊಯಮತ್ತೂರು ಜಿಲ್ಲಾ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಸಹ ಪಾಲ್ಗೊಂಡಿದ್ದರು. ಕಾಡುಗಳ್ಳನ ವಿರುದ್ಧದ ಈ ಬಾರಿಯ ಕಾರ್ಯಾಚರಣೆ ಹೇಗಿರಬೇಕು ಎಂಬ ಬಗ್ಗೆ ಅವರು ಮಾತುಕತೆ ನಡೆಸಿದರು. ತಮ್ಮ ಕಾರ್ಯತಂತ್ರವನ್ನು ಜಗಜ್ಜಾಹೀರು ಪಡಿಸದೆ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಡೆಸುವುದು ಥೇವಾರಂ ತಂತ್ರವಾಗಿದೆ.
ಮಿಗಿಲಾಗಿ ಥೇವಾರಂ ಅವರು, ಈ ಬಾರಿ ಪೊಲೀಸ್ ಇಂಟಲಿಜೆನ್ಸ್ ಪಡೆಯ ಮಾಹಿತಿಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈರೋಡ್ ಅಥವಾ ಕೊಯಮತ್ತೂರಿನಿಂದ ಗುರುವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಹಾಸನೂರು ಇಲ್ಲ ಸತ್ಯಮಂಗಲ ಕಾಡಿನಿಂದ ಕಾರ್ಯಾಚರಣೆ ನಡೆಸುವ ಸಾಧ್ಯತೆಯೂ ಇದೆ.
ಮೈಸೂರು ವರದಿ : ಎರಡು ಮೂರು ದಿನಗಳ ಹಿಂದೆ ಕರ್ನಾಟಕ ಕಾರ್ಯಪಡೆಯ ಮುಖ್ಯಸ್ಥ ಕೆಂಪಯ್ಯ ಅವರು, ಚಾಮರಾಜನಗರಕ್ಕೆ ಭೇಟಿ ನೀಡಿದ್ದು, ಅಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ, ಕಾರ್ಯಾಚರಣೆ ಬಗ್ಗೆ ಅವರು ಯಾವುದೇ ವಿವರ ನೀಡಿಲ್ಲ.
ಮೂಲಗಳ ಪ್ರಕಾರ ಯಾವುದೇ ಕ್ಷಣದಲ್ಲಿ ಮಲೆಮಹದೇಶ್ವರ ಬೆಟ್ಟ ಪ್ರದೇಶದಿಂದ ಕರ್ನಾಟಕ ಪೊಲೀಸರು ಕಾರ್ಯಾಚರಣೆ ಆರಂಭಿಸುವ ಲಕ್ಷಣಗಳು ಕಂಡುಬಂದಿವೆ.