ಕುಕ್ಕೆ ಸುಬ್ರಹ್ಮಣ್ಯದಲ್ಲಿ 22ರಂದು ‘ಅಕ್ಷರ’ ವಸತಿಗೃಹ ಉದ್ಘಾಟನೆ
ಕುಕ್ಕೆ ಸುಬ್ರಹ್ಮಣ್ಯ : ಕುಮರಧಾರಾ ನದಿಯ ದಂಡೆಯಲ್ಲಿರುವ ಸುಳ್ಯ ತಾಲೂಕಿನ ಪವಿತ್ರ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರ್ಮಿಸಲಾಗಿರುವ ನೂತನ ವಸತಿ ಗೃಹ ‘ಅಕ್ಷರ’ದ ಉದ್ಘಾಟನೆ ಹಾಗೂ ಕುಕ್ಕೆ ಸುಬ್ರಹ್ಮಣ್ಯೇಶ್ವರ ವಿದ್ಯಾಲಯ ಮತ್ತು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಜೂನ್ 22ರ ಶುಕ್ರವಾರ ನಡೆಯಲಿದೆ.
ಇದೇ ಸಂದರ್ಭದಲ್ಲಿ ಉದ್ದೇಶಿತ ವಸತಿ ಗೃಹಕ್ಕೆ ಶಂಕುಸ್ಥಾಪನೆ, ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿ ಕಟ್ಟಡದ ಉದ್ಘಾಟನೆಯೂ ನೆರವೇರಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮ ಸಮ್ಮೇಳನ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಸತಿ ಗೃಹಕ್ಕೆ ಶಂಕುಸ್ಥಾಪನೆಯನ್ನು ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಡಿ.ಬಿ. ಚಂದ್ರೇಗೌಡ ನೆರವೇರಿಸಲಿದ್ದಾರೆ.
ಷಣ್ಮುಖ ಪ್ರಸಾದ ಭೋಜನಶಾಲೆಯ ಮೇಲ್ಮಹಡಿ ಉದ್ಘಾಟನೆಯನ್ನು ಮೀನುಗಾರಿಕೆ ಸಚಿವ ಬಿ. ರಮಾನಾಥ ರೈ, ಅಕ್ಷರದ ಉದ್ಘಾಟನೆಯನ್ನು ಧಾರ್ಮಿಕ ದತ್ತಿ ಸಚಿವ ಬಾಬುರಾವ್ ಚಿಂಚನಸೂರ್ ನೆರವೇರಿಸಲಿದ್ದಾರೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಕೆ. ರವೀಂದ್ರನಾಥ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎಡನೀರು ಮದೆಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ, ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಭಾಗವಹಿಸುತ್ತಿದ್ದು, ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ಸಂಸ್ಥೆಗಳಿಗೆ ಈ ಸಂದರ್ಭದಲ್ಲಿ ಶಾಸಕ ಡಿ.ವಿ. ಸದಾನಂದ ಗೌಡ ಅವರು ಸಹಾಯ ಧನ ಬಿಡುಗಡೆ ಮಾಡುವರು ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ವಿ. ಧನಂಜಯ ಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಲೋಕಸಭಾ ಸದಸ್ಯ ವಿನಯ ಕುಮಾರ ಸೊರಕೆ, ಶಾಸಕ ಎಸ್. ಅಂಗಾರ ಮೊದಲಾದವರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ದೂರವಾಣಿ 08257- 81224 ನಿಂದ ಪಡೆಯಬಹುದಾಗಿದೆ.