ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಾಜಿ ನಗರದಲ್ಲಿ 25 ಬಸ್‌ಗಳ ಮೇಲೆ ಕಲ್ಲು ತೂರಾಟ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು ನಗರ ಸಾರಿಗೆ ಬಸ್‌ ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಕಿಟಕಿಯಿಂದ ಹೊರಗೆ ಕೈಹಾಕಿ ಕುಳಿತಿದ್ದ ಯುವತಿಯ ಬಲಗೈ ತುಂಡಾಗಿ ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪ್ರಯಾಣಿಕರು ಸುಮಾರು 25 -30 ಬಸ್‌ ಗಳಿಗೆ ಕಲ್ಲುತೂರಿದ್ದರಿಂದ ಶಿವಾಜಿನಗರ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಶಿವಾಜಿನಗರ ಬಸ್‌ ನಿಲ್ದಾಣದಿಂದ ನಾಗವಾರಕ್ಕೆ ಹೊರಟಿದ್ದ ಬಸ್‌ ರಿವರ್ಸ್‌ ತೆಗೆದುಕೊಳ್ಳುವ ಯತ್ನದಲ್ಲಿ ಪಕ್ಕದಲ್ಲಿ ನಿಂತಿದ್ದ ಬಸ್‌ಗೆ ಉಜ್ಜಿಕೊಂಡೇ ಚಲಿಸಿದಾಗ ಬಲಗೈಯನ್ನು ಕಿಟಕಿಯಿಂದ ಹೊರಚಾಚಿ ಕುಳಿತಿದ್ದ 18 ವರ್ಷದ ಯುವತಿಯ ಕೈ ತುಂಡಾಗಿ ಕೆಳಗೆ ಬಿತ್ತು.

ಹೃದಯ ವಿದ್ರಾವಕವಾದ ಈ ಘಟನೆಯನ್ನು ಕಂಡ ಪ್ರಯಾಣಿಕರು, ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ಹಳಿಯುತ್ತಾ ರೊಚ್ಚಿಗೆದ್ದು ಕಲ್ಲು ತೂರಲು ಪ್ರಾರಂಭಿಸಿದರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ, ಜನರನ್ನು ಸಮಾಧಾನ ಪಡಿಸುವ ಹೊತ್ತಿಗೆ ಸುಮಾರು 25-30 ಬಸ್‌ಗಳ ಕಿಟಕಿಯ ಗಾಜುಗಳು ಪುಡಿಪುಡಿಯಾಗಿದ್ದವು.

ಈ ಘಟನೆಯಿಂದಾಗಿ ಶಿವಾಜಿನಗರ ಬಸ್‌ ನಿಲ್ದಾಣ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿ ಉರುಳಿ 6 ಸಾವು : ಬಾಗಲಕೋಟೆ ಬಳಿ ಸೇತುವೆ ಕಾಮಗಾರಿಗೆಂದು ಕೂಲಿಯಾಳುಗಳನ್ನು ಕರೆದೊಯ್ಯುತ್ತಿದ್ದ ಲಾರಿಯಾಂದು ಉರುಳಿಬಿದ್ದ ಪರಿಣಾಮವಾಗಿ 6 ಜನರು ಸ್ಥಳದಲ್ಲೇ ಸತ್ತು, ಇತರ 60 ಮಂದಿ ಗಾಯಗೊಂಡ ದುರ್ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.

ಎಲ್ಲ ಗಾಯಾಳುಗಳನ್ನೂ ಬೆಳಗಾವಿಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತಪಟ್ಟವರನ್ನು ಗುಬ್ಬವ್ವ (42) ಶಾಂತವ್ವ (22), ಚಿದಾನಂದ ರಾಠೋಡ (16), ಮಹಾಂತಪ್ಪ (26) ಹಾಗೂ ಟ್ರಕ್‌ ಕ್ಲೀನರ್‌ ಎಂದು ಗುರುತಿಸಲಾಗಿದೆ. ಲಾರಿಯಲ್ಲಿ ಒಟ್ಟು 80 ಜನ ಕೂಲಿಯಾಳುಗಳು ಪ್ರಯಾಣಿಸುತ್ತಿದ್ದರು.

ಹುನಗುಂದ ತಾಲೂಕಿನ ಚಿಕ್ಕ ಕೊಡಗಲಿ ತಾಂಡಾದಿಂದ ಈ ಕೂಲಿಯಾಳುಗಳನ್ನು ಕಲಾದಗಿ ಸಮೀಪ ನಡೆಯುತ್ತಿರುವ ಸೇತುವೆ ಕಾಮಗಾರಿಗಾಗಿ ಲಾರಿಯಲ್ಲಿ ಕರೆದೊಯ್ಯಲಾಗುತ್ತಿತ್ತು. ಕಮತಗಿ - ಶಿರೂರು ಮಧ್ಯೆ ಓವರ್‌ಟೇಕ್‌ ಮಾಡುವ ಯತ್ನದಲ್ಲಿ ಕಲ್ಲಿಗೆ ಬಡಿದು, ಟೈರ್‌ ಒಡೆದ ಪರಿಣಾಮವಾಗಿ ಲಾರಿ ಪಕ್ಕದ ಹಳ್ಳಕ್ಕೆ ಉರುಳಿತು ಎಂದು ಪೊಲೀಸರು ತಿಳಿಸಿದ್ದಾರೆ.

(ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X