ಕೊಡಗಿನ ಹೊಸ ಜಿಲ್ಲಾಧಿಕಾರಿಯಾಗಿ ಜಿ.ವಿ. ರಾಮಚಂದ್ರ
ಮಡಿಕೇರಿ: ಕೊಡಗಿನ ನೂತನ ಜಿಲ್ಲಾಧಿಕಾರಿಯಾಗಿ ಜಿ.ವಿ. ರಾಮಚಂದ್ರ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಮೂಲತಃ ಕೋಲಾರದ ಗಂಜಿಗುಂಟೆಯವರಾದ ರಾಮಚಂದ್ರ ಅವರು ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ಅನುಭವ ಉಳ್ಳವರು.
ಸಾಂಕೇತಿಕವಾಗಿ ಕೊಡಗು ಜಿಲ್ಲಾ ತಾತ್ಕಾಲಿಕವಾಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಜಯರಾಂ ಅವರಿಂದ ಜಿಲ್ಲಾಧಿಕಾರಿ ಕಚೇರಿಯ ಬೀಗದ ಕೈ ತೆಗೆದುಕೊಳ್ಳುವ ಮೂಲಕ ತಮ್ಮ ಪ್ರಥಮ ದಿನವನ್ನು ರಾಮಚಂದ್ರ ಆರಂಭಿಸಿದರು. ಸೌಂದರ್ಯಕ್ಕೆ ಹೆಸರಾದ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವುದು ತಮಗೆ ಖುಷಿ ತಂದಿದೆ ಎಂದ ರಾಮಚಂದ್ರ, ಇಲ್ಲಿನ ಯೋಧರಾದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಅಭಿಮಾನಿ ತಾವೆಂದು ಹೇಳಿದರು.
ಕರ್ನಾಟಕಕ್ಕೆ ಅತೀ ಹೆಚ್ಚು ಆದಾಯ ತರುವ ನಾಡು ಎಂದೇ ಪ್ರಸಿದ್ಧವಾದ ಕೊಡಗಿನಲ್ಲಿ ಸರಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಎನ್ನುವ ದೂರಿದೆ. ಕೊಡಗನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂಬ ಚಳುವಳಿಯೂ ಆಗೊಮ್ಮೆ ಈಗೊಮ್ಮೆ ಬಿರುಸಾಗುತ್ತಿದೆ. ಇವುಗಳನ್ನು ನಿಭಾಯಿಸಿಕೊಂಡು ಕೆಲಸ ಮಾಡುವ ಜವಾಬ್ದಾರಿ ರಾಮಚಂದ್ರ ಅವರ ಮೇಲಿದೆ.
(ಇನ್ಫೋ ವಾರ್ತೆ)