ಮಾಜಿ ಪ್ರಧಾನಿ ದೇವೇಗೌಡ ಮಲ್ಯ ಆಸ್ಪತ್ರೆಗೆ ದಾಖಲು
ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡ ಅವರು ಎದೆ ನೋವಿನಿಂದ ನರಳುತ್ತಿದ್ದು, ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಸೇರಿಸಲಾಗಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಎದೆ ನೋವು ಇದ್ದರೂ, ಅದನ್ನು ಲೆಕ್ಕಿಸದೆ ದೇವೇಗೌಡರು ಸೋಮವಾರ ಹೆಲಿಕಾಪ್ಟರ್ನಲ್ಲಿ ಬೆಳಗಾವಿಗೆ ಹೋಗಿದ್ದಲ್ಲದೆ, ಆತ್ಮೀಯರ ಮದುವೆಯ ಸಮಾರಂಭದಲ್ಲೂ ಪಾಲ್ಗೊಂಡಿದ್ದರು. ಆಯಾಸದಿಂದಾಗಿ ನೋವು ಉಲ್ಬಣವಾದ ಕಾರಣ ಅವರನ್ನು ಸೋಮವಾರ ಸಂಜೆ ಮಲ್ಯ ಆಸ್ಪತ್ರೆಗೆ ಸೇರಿಸಲಾಯಿತು.
ದೇವೇಗೌಡರನ್ನು ಪರೀಕ್ಷಿಸಿದ ವೈದ್ಯರು ಗ್ಯಾಸ್ಟ್ರಿಕ್ ತೊಂದರೆಯಿಂದಾಗಿ ನೋವು ಕಾಣಿಸಿಕೊಂಡಿದೆ, ಗೌಡರು ಆರೋಗ್ಯವಾಗಿದ್ದಾರೆ ಯಾವುದೇ ಕಳವಳ ಬೇಡ ಎಂದು ತಿಳಿಸಿದ್ದಾರೆ. ಮಂಗಳವಾರ ಸಂಜೆ ಇಲ್ಲವೇ ಬುಧವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದೂ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ದೇವೇಗೌಡರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಷಯ ತಿಳಿದ ಮುಖ್ಯಮಂತ್ರಿ ಕೃಷ್ಣ ಅವರು, ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
(ಇನ್ಫೋ ವಾರ್ತೆ)