ಮೈಸೂರು - ಬೆಂಗಳೂರು ಕಾರಿಡಾರ್ ಯೋಜನೆ ಕಾರ್ಯಗತ ಖಚಿತ
ಬೆಂಗಳೂರು : ಬೆಂಗಳೂರು - ಮೈಸೂರು ನಡುವಣ ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆ, ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಯನ್ನು ಕಾರ್ಯಗತವಾಗುವುದು ನೂರಕ್ಕೆ ನೂರು ಖಚಿತ ಎಂದು ಲೋಕೋಪಯೋಗಿ ಸಚಿವ ಧರ್ಮಸಿಂಗ್ ಹೇಳಿದ್ದಾರೆ.
ಬೆಂಗಳೂರು - ಮೈಸೂರು ನಡುವಿನ ಈ ಮಾರ್ಗದಲ್ಲಿ 5 ಉಪನಗರಗಳು ಬರಲಿವೆ. ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣವಾಗಿದೆ. ಪರಿಹಾರ ವಿತರಣೆಯೂ ನಡೆಯುತ್ತಿದೆ. ಆದರೆ, ಯಾರೋ ಕೆಲವರು ಇದಕ್ಕೆ ಪರಿಸರದ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು - ಮೈಸೂರು ರಸ್ತೆಯಲ್ಲಿ ಆನೆ, ಸಿಂಹ, ಕರಡಿಗಳು ಓಡಾಡುತ್ತವೆಯೇ ಎಂದು ಅವರು ಪ್ರಶ್ನಿಸಿದರು.
ಪ್ರಸ್ತುತ ಕೇಂದ್ರ ಪರಿಸರ ಸಚಿವರು ವಿದೇಶ ಪ್ರವಾಸದಲ್ಲಿದ್ದು, ಅವರು ದೆಹಲಿಗೆ ಹಿಂತಿರುಗಿದ ಬಳಿಕ ಯೋಜನೆಗೆ ಅನುಮತಿ ದೊರಕಲಿದೆ ಎಂದರು. ಈ ಕಾರಿಡಾರ್ ಯೋಜನೆ ಕಾರ್ಯಗತವಾದರೆ ಬೆಂಗಳೂರಿನಿಂದ ಮೈಸೂರಿಗೆ ಕೇವಲ 1 ಗಂಟೆ 10 ನಿಮಿಷದಲ್ಲಿ ಪ್ರಯಾಣ ಮಾಡಬಹುದಾಗಿದೆ. ಬಿಡದಿ, ರಾಮನಗರ, ಚನ್ನಪಟ್ಟಣಗಳಲ್ಲಿ ಕೂಡ ಉಪನಗರ ನಿರ್ಮಾಣವಾಗಲಿದೆ ಎಂದರು.
ಈ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 62 ಎಕರೆ ಭೂಮಿ ನೀಡಲು ಒಪ್ಪಿದ್ದರೆ, ಜಲಮಂಡಲಿ 2 ಟಿ.ಎಂ.ಸಿ. ನೀರು ಒದಗಿಸಲು ಒಪ್ಪಿದೆ ಎಂದರು. 1995ರಲ್ಲೇ ಈ ಯೋಜನೆಗೆ ಶಿಲಾನ್ಯಾಸ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಈ ಯೋಜನೆಗೆ ಚಾಲನೆ ನೀಡಿದ್ದರು. ನಾವು ಕಾರ್ಯಗತ ಮಾಡಲು ಯೋಜನೆಗೆ ಸಮಗ್ರ ಚಾಲನೆ ನೀಡುತ್ತಿದ್ದೇವೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...