ಬೆಂಗಳೂರಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ : 14 ಮಂದಿ ಸೆರೆ
ಬೆಂಗಳೂರು : ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 14 ಮಂದಿಯನ್ನು ನಗರದ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ರಸ್ತೆಯ ರಾಜೇಶ (32), ಕುಮಾರ ಪಾರ್ಕ್ನ ಡಿ.ಎನ್.ಷಾ (57), ಮಲ್ಲೇಶ್ವರಂನ ಮಹೇಂದ್ರ (19), ಕಾಟನ್ಪೇಟೆಯ ಅನಂತಕುಮಾರ್ (35), ಎನ್.ಟಿ.ಪೇಟೆಯ ಪ್ರಸನ್ನ ಕುಮಾರ್ (38), ಮಾಗಡಿ ರಸ್ತೆ ದಾಸರಹಳ್ಳಿಯ ಆರ್.ಮನೋಜ್ (37), ಹೆಚ್.ಎ.ಎಲ್. 2ನೇ ಹಂತದ ನಿರಂಜನ ರೆಡ್ಡಿ (50), ಆರ್.ಸಿ.ರಸ್ತೆಯ ರಾಘವೇಂದ್ರ (50) ಹಾಗೂ ರಮೇಶ್ (30), ಸ್ಯಾಂಕಿ ರಸ್ತೆಯ ಮೋಯಿ (41), ಕಾಟನ್ ಪೇಟೆಯ ಬಂಟಿ (45) ಹಾಗೂ ಚನ್ನಪಟ್ಟಣದ ಸಾಹುಕಾರ್ ಪೇಟ್ನ ರೆಹಮಾನ್ (46) ಇವರೇ ಬಂಧಿತ ಆರೋಪಿಗಳು.
ರೇಸ್ಕೋರ್ಸ್ ರಸ್ತೆಯ ಸ್ವಿಸ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಈ ಸತ್ತಾಬಾಜಿ ನಡೆಯುತ್ತಿತ್ತು. ಪ್ರತಿ ರನ್ಗಳ ಮೇಲೆ ಹಣ ಕಟ್ಟಲಾಗುತ್ತಿತ್ತು. ದೂರವಾಣಿ ಮೂಲಕ ಗಿರಾಕಿಗಳೊಡನೆ ಸಂಪರ್ಕ ಇಟ್ಟುಕೊಂಡಿದ್ದ ಈ ಮಂದಿ ಅವರ ಮಾತನ್ನು ಸಾಕ್ಷಿಗಾಗಿ ಟೇಪ್ರೆಕಾರ್ಡರ್ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು.
ಸುಮಾರು 15 ರಿಂದ 16 ಲಕ್ಷ ರುಪಾಯಿವರೆಗೆ ಬಾಜಿ ಕಟ್ಟಿರುವ ಸಾಧ್ಯತೆಯನ್ನು ಪೊಲೀಸರು ತಿಳಿಸಿದ್ದಾರೆ. ವಿಡಿಯೋ ಕೆಮೆರಾ, ಜೂಜಾಟದ ಪಣದ ಹಣ 1 ಲಕ್ಷದ 64 ಸಾವಿರದ 910 ರುಪಾಯಿ, 8 ಮೊಬೈಲ್ ಫೋನುಗಳು, 7 ಟೇಪ್ರೆಕಾರ್ಡರ್ಗಳು, ಕೆಸೆಟ್ಗಳು ಹಾಗೂ ಕ್ಯಾಲುಕ್ಯುಲೇಟರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಸಿಪಿ ಗೋಪಾಲ್ ಬಿ. ಹೊಸೂರ್ ನೇತೃತ್ವದ ಪೊಲೀಸ್ ಪಡೆ ಈ ಎಲ್ಲಾ 14 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಆರೋಪಿಗಳಿಗೆ ದೆಹಲಿ ಬುಕ್ಕಿಗಳ ಸಂಪರ್ಕವಿದೆ ಎಂಬ ಶಂಕೆಯಿದ್ದು , ತನಿಖೆ ನಡೆಯುತ್ತಿದೆ.
(ಇನೋ ವಾರ್ತೆ)