ಆಂಧ್ರ ಅಕ್ರಮ ಕಾಮಗಾರಿ ವಿರುದ್ಧ ಜುಲೈ 9ರಂದು ಸುಪ್ರೀಂ ಕೋರ್ಟ್ಗೆ
ಬೆಂಗಳೂರು: ಆಂಧ್ರ ಪ್ರದೇಶ ಸರಕಾರ ಬಚಾವತ್ ತೀರ್ಪು ಹಾಗೂ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ, ಕೈಗೊಂಡಿರುವ ಐದು ಅಕ್ರಮ ನೀರಾವರಿ ಕಾಮಗಾರಿಗಳನ್ನು ನಿಲ್ಲಿಸಲು ಆದೇಶ ನೀಡುವಂತೆ ಕೋರಿ ಜುಲೈ 9ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯ ಸರಕಾರ ಮನವಿ ಸಲ್ಲಿಸಲಿದೆ. ಈ ವಿಷಯವನ್ನು ರಾಜ್ಯ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ತೆಲುಗು ಗಂಗಾ, ಶ್ರೀಶೈಲ ಬಲದಂಡೆ ನೀರಾವರಿ ಕಾಮಗಾರಿ, ಶ್ರೀಶೈಲ ಎಡದಂಡೆ ಕಾಮಗಾರಿ ಹಾಗೂ ಭೀಮ ಏತ ನೀರಾವರಿ ಯೋಜನೆಗಳನ್ನು ಕೈಗೊಂಡಿರುವ ಆಂಧ್ರ ಪ್ರದೇಶ ಸರಕಾರ ಬಚಾವತ್ ತೀರ್ಪನ್ನು ಉಲ್ಲಂಘಿಸಿದೆ. ಅಕ್ರಮವಾಗಿ ಫೀಡರ್ ಕಾಲುವೆಯನ್ನೂ ತೋಡಿದೆ. ಈ ಅಕ್ರಮ ಕಾಮಗಾರಿಗಳ ವಿರುದ್ಧ ರಾಜ್ಯ ಸರಕಾರ ರಾಜಕೀಯ ಕ್ರಮಗಳನ್ನು ಕೈಗೊಂಡು, ಕರ್ನಾಟಕದ ರೈತರ ಹಿತವನ್ನು ರಕ್ಷಿಸುವುದು ಎಂದು ಅವರು ಹೇಳಿದರು.
ಸರ್ವೋಚ್ಚ ನ್ಯಾಯಾಲಯಕ್ಕೆ ಜುಲೈ 9ರವರೆಗೆ ರಜೆ ಇದೆ. ಹೀಗಾಗಿ ನಾವು ಮನವಿ ಸಲ್ಲಿಸಲು ಕಾಯುವುದು ಅನಿವಾರ್ಯವಾಗಿದೆ. ಜುಲೈ 9ರಂದು ಆಂಧ್ರದ 5 ಅಕ್ರಮ ಕಾಮಗಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.
ಕಾವೇರಿ ಕಣಿವೆಯಲ್ಲಿ ಕೆರೆಗಳ ಹೂಳೆತ್ತುವ ವಿಷಯಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಇದೆಯಾದರೂ ಹೂಳೆತ್ತುವ ಕಾರ್ಯ ಮುಂದುವರಿಯಲಿದೆ. ಕೆರೆಗಳ ಹೂಳೆತ್ತುವ ಕಾರ್ಯ ವಿಸ್ತರಣೆ ಕಾಮಗಾರಿಯಲ್ಲ ಎಂದು ಸಚಿವರು ಸ್ಪಷ್ಟೀಕರಣ ನೀಡಿದರು.
ಉತ್ತರ ಕರ್ನಾಟಕಕ್ಕೆ ಆದ್ಯತೆ : ಬೆಳಗಾವಿ, ಬಿಜಾಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ 79 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸಲು ಹಿಪ್ಪರಗಿ ಏತ ನೀರಾವರಿ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಪಾಟೀಲ್ ಹೇಳಿದರು.