ಗುಲ್ಬರ್ಗಾದಲ್ಲಿ ಬಾರ್ ಉದ್ಘಾಟಿಸಿದ ಸ್ವಾಮೀಜಿ ತರಾಟೆಗೆ !
ಗುಲ್ಬರ್ಗಾ : ಸ್ವಾಮೀಜಿಗಳು ವಿದ್ಯಾಸಂಸ್ಥೆಗಳನ್ನ, ಸೇತುವೆಗಳನ್ನ, ಧಾರ್ಮಿಕ ಸಂಸ್ಥೆಗಳ ಕಟ್ಟಡಗಳನ್ನ ಕೊನೆಗೆ ಕಂಪ್ಯೂಟರ್ ಕೇಂದ್ರವನ್ನ ಉದ್ಘಾಟನೆ ಮಾಡಿರುವುದನ್ನು ಕೇಳಿದ್ದೇವೆ. ಹೊಸತೆಂದರೆ- ಬಡದಾಳದ ಚೆನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಬಾರೊಂದನ್ನು ಉದ್ಘಾಟಿಸಿದ್ದಾರೆ!
ನಗರದ ಹೊರ ವಲಯದಲ್ಲಿ ಕ್ರಿಸ್ಟಲ್ ಎಂಬ ಹೆಸರಿನ ಬಾರೊಂದನ್ನು ಕಳೆದ ತಿಂಗಳು ಸ್ವಾಮೀಜಿ ಉದ್ಘಾಟಿಸಿದ್ದರು. ಸತ್ಯ, ಧರ್ಮ, ಅಹಿಂಸೆ, ಆಧ್ಯಾತ್ಮಿಕತೆ, ನೈತಿಕತೆ ಕುರಿತಾದ ಅಂಶಗಳನ್ನು ಸಾರಬೇಕಾದ ಸ್ವಾಮೀಜಿ ಬಾರ್ ಉದ್ಘಾಟಿಸೋದು ಅಂದರೆ ಎಂಥಾ ಅನಾಚಾರ ? ಇಂಥಾ ಢೋಂಗಿ ಸ್ವಾಮಿಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಬೇಕು ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಹಾಗೂ ಸಂಯುಕ್ತ ಜನತಾ ದಳದ ನಾಯಕ ಬಿ.ಆರ್.ಪಾಟೀಲ್ ಕರೆ ಕೊಟ್ಟಿದ್ದಾರೆ.
ಚೆನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಬಾರ್ ಉದ್ಘಾಟಿಸಿರುವುದರ ಕುರಿತು ಅಖಿಲ ಬಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದೇನೆ. ಇಂಥಾ ಸ್ವಾಮೀಜಿಗಳ ಬಗ್ಗೆ ಬಗ್ಗೆ ಜನತೆ ಎಚ್ಚರದಿಂದಿರಬೇಕು ಎಂದರು.
ಮೇ 31ರಂದು ಕ್ರಿಸ್ಟಲ್ ಬಾರನ್ನು ಉದ್ಘಾಟಿಸಲಾಗಿತ್ತು. ಅಂದಹಾಗೆ, ಆ ಸಮಾರಂಭದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೂಡ ಹಾಜರಿದ್ದರು !
(ಇನ್ಫೋ ವಾರ್ತೆ)