ಮಂಗಳೂರಿನಲ್ಲಿ ಆದಿಚುಂಚನಗಿರಿ ಮಠದ ಶಾಖೆ- ವಿದ್ಯಾಸಂಸ್ಥೆ
ಮಂಗಳೂರು : ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯಾಸಂಸ್ಥೆ ಮತ್ತು ಆದಿಚುಂಚನಗಿರಿ ಮಠದ ಶಾಖೆಯನ್ನು ಮಂಗಳೂರಿನಲ್ಲಿ ತೆರೆಯಲು ನಿರ್ಧರಿಸಿದ್ದಾರೆ.
ಧಾರ್ಮಿಕ ವಾತಾವರಣದಲ್ಲಿ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುವುದು ಮಠದ ಮೂಲ ಉದ್ದೇಶವಾಗಿದ್ದು , ಸ್ಥಳೀಯರು ಇದರಿಂದ ಸಾಕಷ್ಟು ಪ್ರಯೋಜನ ಪಡೆಯಬೇಕು ಎಂದು ಸ್ವಾಮೀಜಿ ಹೇಳಿದರು. ಇತ್ತೀಚೆಗೆ ಮಂಗಳೂರಿನ ಎ.ಬಿ. ಶೆಟ್ಟಿ ಮೆಮೋರಿಯಲ್ ಹಾಲ್ನಲ್ಲಿ ಬಂಟರ ಸಂಘ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಅವರು ಮಾತನಾಡುತ್ತಿದ್ದರು.
ಕಾವೂರಿನ ಬಳಿ 10 ಎಕರೆ ಜಾಗದಲ್ಲಿ ವಿದ್ಯಾಲಯವು ತಲೆಯೆತ್ತಲಿದ್ದು , ಸದ್ಯದಲ್ಲಿಯೇ ಇದರ ಕಾಮಗಾರಿ ಆರಂಭವಾಗಲಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ. ರಮಾನಾಥ ರೈ ಮಾತನಾಡಿ ಬಂಟರ ಸಂಘವು ಸಮರ್ಥ ಮುಂದಾಳತ್ವವಿಲ್ಲದೆ ಸೊರಗುತ್ತಿದೆ. ಸಂಘಟನೆಗೆ ಸ್ವಾಮೀಜಿಯ ಮಾರ್ಗದರ್ಶನ ಅಗತ್ಯ. ಅಂತೆಯೇ ಸ್ವಾಮೀಜಿಗಳ ವಿದ್ಯಾ ಯೋಜನೆಗೆ ಸಂಘವು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
(ಇನ್ಫೋ ವಾರ್ತೆ)