ಮಂಗಳವಾರದಿಂದ ದೆಹಲಿಯ ನಿವಾಸದಲ್ಲೇ ಪ್ರಧಾನಿ ವಾಸ-ವಿಶ್ರಾಂತಿ
ನವದೆಹಲಿ : ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬಲ ಮಂಡಿ ಶಸ್ತ್ರ ಚಿಕಿತ್ಸೆಯ ನಂತರ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಗುಣಮುಖರಾಗಿದ್ದು ಮಂಗಳವಾರ ಅವರು ರಾಜಧಾನಿಗೆ ವಾಪಾಸ್ಸಾಗಲಿದ್ದಾರೆ.
ಇನ್ನು ಮೂರು ವಾರಗಳ ಕಾಲ ತಮ್ಮ ನಿವಾಸದಲ್ಲಿಯೇ ಪ್ರಧಾನಿ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಮಾನಸಿಕವಾಗಿ ಸದೃಢರಾಗಿರುವ ವಾಜಪೇಯಿ, ಆಸ್ಪತ್ರೆಯಿಂದಲೇ ತಮ್ಮ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರದಿಂದ ಅವರು ತಮ್ಮ ನಿವಾಸದಿಂದಲೇ ಕೆಲಸ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ಪ್ರಧಾನಿ ನಿವಾಸದ ಮೂಲಗಳು ಹೇಳಿವೆ.
76 ವರ್ಷದ ವಾಜಪೇಯಿ ಅವರ ಬಲಮಂಡಿಗೆ ಜೂನ್ 7ರಂದು ಡಾ. ಚಿತ್ತರಂಜನ್ ರಣಾವತ್ ಮುಂಬಯಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ತಮ್ಮ ನಿವಾಸದಲ್ಲಿಯೇ ಕೆಲಸ ನಿರ್ವಹಿಸಲಿರುವ ಪ್ರಧಾನಿಗಳಿಗೆ ಆರು ತಿಂಗಳ ಕಾಲ ಆರೈಕೆ ಮುಂದುವರೆಯುತ್ತದೆ. ಬೇಗನೇ ಗುಣಮುಖರಾಗಲು, ದೇಹದ ಬೊಜ್ಜು ಕಡಿಮೆ ಮಾಡಿಕೊಳ್ಳುವಂತೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ರಣಾವತ್ ಪ್ರಧಾನಿಗಳಿಗೆ ಸಲಹೆ ಮಾಡಿದ್ದಾರೆ.
ಜುಲೈ ತಿಂಗಳಲ್ಲಿ ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಜನರಲ್ ಪರ್ವೇಜ್ ಮುಷರ್ರಫ್ ಅವರ ಭಾರತ ಭೇಟಿಗೆ ಮುನ್ನ ತಮ್ಮ ಆರೋಗ್ಯ ಸುಧಾರಿಸಬೇಕೆಂಬುದು ವಾಜಪೇಯಿ ಬಯಕೆ. ತಾವು ವಾಪಾಸಾಗುವ ವೇಳೆ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಹೂಗುಚ್ಛಗಳೊಂದಿಗೆ ಸ್ವಾಗತಿಸಲು ಮುಗಿ ಬೀಳಬಾರದು ಎಂದು ಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
(ಐಎಎನ್ಎಸ್)