ಚೀನಾಕ್ಕೆ ರೇಷ್ಮೆ ವಸ್ತ್ರಗಳ ರಫ್ತು : ಕರ್ನಾಟಕದ ಐತಿಹಾಸಿಕ ಸಾಧನೆ
ಬೆಂಗಳೂರು : ರೇಷ್ಮೆಯ ಉತ್ಪಾದನೆಯಲ್ಲಿ ವಿಶ್ವದಲ್ಲೇ ಅಗ್ರೇಸರನಾಗಿರುವ ಚೀನಾ ದೇಶಕ್ಕೆ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕದ ಶುದ್ಧ ರೇಷ್ಮೆ ವಸ್ತ್ರಗಳನ್ನು ರಫ್ತು ಮಾಡಲಾಗುತ್ತಿದೆ.
ಚೀನಾದ ಬೀಜಿಂಗ್ನಲ್ಲಿರುವ ರೇಷ್ಮೆ ಆಮದು ಮತ್ತು ರಫ್ತು ನಿಗಮದ ಸೋದರ ಸಂಸ್ಥೆ ಸಿನೋ ಇಟಲಿ ಅಪೇರಲ್ ಕಂಪನಿಗೆ ಶಾಂತಾಲಾ ಗ್ರೂಪ್ನ ಹನುಮಾನ್ ವೀವಿಂಗ್ ಕಾರ್ಖಾನೆಯ 25 ಲಕ್ಷ ರುಪಾಯಿ ಮೊತ್ತದ ಶುದ್ಧ ರೇಷ್ಮೆ ವಸ್ತ್ರಗಳನ್ನು ಸರಬರಾಜು ಮಾಡಲಾಗುತ್ತಿದೆ. ಈ ವಿಷಯವನ್ನು ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇಂದ್ರ ರೇಷ್ಮೆ ಮಂಡಳಿ ಮಡಿವಾಳದ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕದಿಂದ ಚೀನಾಕ್ಕೆ ರಫ್ತಾಗಲಿರುವ ಮೊದಲ ಕಂತಿನ ರೇಷ್ಮೆ ವಸ್ತ್ರಗಳನ್ನು ಅವರು ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದ ರೇಷ್ಮೆ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು ಎಂದು ಬಣ್ಣಿಸಿದರು.
ಇದುವರೆಗೆ ನಾವು ಚೀನಾದಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ನಾವೇ ಉತ್ತಮ ಗುಣಮಟ್ಟದ ರೇಷ್ಮೆಯನ್ನು ಚೀನಾಕ್ಕೆ ರಫ್ತು ಮಾಡುತ್ತಿದ್ದೇವೆ. ಉತ್ತಮ ರೇಷ್ಮೆ ಉತ್ಪಾದನೆಗೆ ಮಂಡಳಿ ಹಾಗೂ ರಾಜ್ಯ ಸರಕಾರ ಜಂಟಿಯಾಗಿ 50 ಸಾವಿರ ರುಪಾಯಿಗಳ ಸಬ್ಸಿಡಿ ನೀಡುತ್ತಿದೆ. ರೇಷ್ಮೆ ಬೆಳೆಗಾರರು ಈ ಸೌಲಭ್ಯ ಬಳಸಿಕೊಂಡು ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಖ್ಯಾತಿಯನ್ನು ಉತ್ತುಂಗಕ್ಕೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ಸಚಿವ ಮಹದೇವ್ ಅವರು, ಚೀನಾದಿಂದ ಆಮದಾಗುವ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ. 50 ರಷ್ಟು ಹೆಚ್ಚಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು. ಸರಕಾರ 1 ಕೋಟಿ ರುಪಾಯಿ ವೆಚ್ಚದಲ್ಲಿ ಆರಂಭಿಸಿರುವ ರೇಷ್ಮೆ ಸಂಪತ್ತು ಯೋಜನೆಯಡಿ ಅಂಗವಿಕಲರಿಗೆ, ಮಹಿಳೆಯರಿಗೆ ಹಾಗೂ ಸಣ್ಣ ಹಿಡುವಳಿ ರೈತರು ರೇಷ್ಮೆ ಬೆಳೆಸಲು ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದೂ ವಿವರಿಸಿದರು.
ಈ ಐತಿಹಾಸಿಕ ಸಮಾರಂಭದಲ್ಲಿ ರೇಷ್ಮೆ ಇಲಾಖೆ ಸದಸ್ಯ ಕಾರ್ಯದರ್ಶಿ ಪಿ. ಜಾಯ್ ಓಮನ್ ಹಾಗೂ ಶಾಂತಲಾ ಸಿಲ್ಕ್ ಮಾಲಿಕ ಟಿ.ವಿ. ಮಾರುತಿ, ನಾಗೇಂದ್ರ ಶಾ ಮೊದಲಾದವರು ಪಾಲ್ಗೊಂಡಿದ್ದರು.