ಒಂಡೇ ಕ್ರಿಕೆಟ್ : ಶೆಹ್ವಾಗ್, ದಿನೇಶ್, ರಿತಿಂದರ್ಗೆ ಬುಲಾವು
ಮುಂಬಯಿ : ಜೂನ್ 23 ರಿಂದ ಜುಲೈ 7 ರವರೆಗೆ ಜಂಬಾಬ್ವೆ ನೆಲದಲ್ಲಿ ನಡೆಯುವ ತ್ರಿಕೋಣ ಕ್ರಿಕೆಟ್ ಸರಣಿ ಪಂದ್ಯಗಳಿಗೆ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು , ರಿತಿಂದರ್ ಸಿಂಗ್ ಸೋಧಿ, ವೀರೇಂದ್ರ ಶೆಹ್ವಾಗ್, ದಿನೇಶ್ ಮಾಂಗಿಯಾ ಹಾಗೂ ಹರ್ವೀಂದರ್ ಸಿಂಗ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ವೇಗದ ಬೌಲರ್ ಶ್ರೀನಾಥ್ ಅವರಿಗೆ ಅವರ ಕೋರಿಕೆಯ ಮೇರೆಗೆ ಏಕದಿನ ಪಂದ್ಯಗಳಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಉಳಿದಂತೆ ಶಿವಸುಂದರ್ ದಾಸ್, ರಮೇಶ್ ಹಾಗೂ ಸಾಯಿರಾಜ್ ಬಹುತುಲೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದು , ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಮುಗಿದ ನಂತರ (ಜೂನ್ 19) ಅವರುಗಳು ಭಾರತಕ್ಕೆ ವಾಪಸ್ಸಾಗುವರು.
ಕರ್ನಾಟಕದ ವೆಂಕಟೇಶ್ ಪ್ರಸಾದ್ ಹಾಗೂ ಸುನೀಲ್ ಜೋಶಿ ಮತ್ತೊಮ್ಮೆ ಆಯ್ಕೆದಾರರ ಅವಕೃಪೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಏಕದಿನ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿದ್ದ ವಿಕೆಟ್ ಕೀಪರ್ ವಿಜಯ್ ದಹಿಯಾ ಕೂಡ ತಂಡಕ್ಕೆ ಆಯ್ಕೆಯಾಗಿಲ್ಲ . ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ತಂಡವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಆಯ್ಕೆ ಸಮಿತಿ ಅಧ್ಯಕ್ಷ ಚಂದು ಬೋರ್ಡೆ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ತಂಡ ಇಂತಿದೆ-
ಸೌರವ್ ಗಂಗೂಲಿ (ನಾಯಕ), ರಾಹುಲ್ ದ್ರಾವಿಡ್ (ಉಪ ನಾಯಕ), ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಹೇಮಾಂಗ್ ಬದಾನಿ, ಸಮೀರ್ ದಿಘ, ದೇಬಶಿಶ್ ಮೊಹಾಂತಿ, ಜಹೀರ್ ಖಾನ್, ಹರ್ಭಜನ್ಸಿಂಗ್, ರೀತಿಂದರ್ ಸಿಂಗ್ ಸೋಧಿ, ಹರ್ವೀಂದರ್ ಸಿಂಗ್, ಅಜಿತ್ ಅಗರ್ಕರ್, ದಿನೇಶ್ ಮಾಂಗಿಯಾ ಹಾಗೂ ವೀರೇಂದ್ರ ಶೆಹ್ವಾಗ್.
(ಏಜೆನ್ಸೀಸ್)