‘ಮೀಸಲುಪಡೆಗೆ ಸಿಗದ ವೀರಪ್ಪನ್ನನ್ನು ಜ್ಯೋತಿಷಿಗಳು ಹಿಡಿಯಬಲ್ಲರು’
ಹೊಸಪೇಟೆ : ಮೀಸಲು ಪಡೆ ಮತ್ತು ಪೊಲೀಸರಿಂದ ಈವರೆಗೆ ವೀರಪ್ಪನ್ನನ್ನು ಬಂಧಿಸುವುದು ಸಾಧ್ಯವಾಗಿಲ್ಲ. ಆದರೆ ಜ್ಯೋತಿಷ್ಯಶಾಸ್ತ್ರದಿಂದ ಆತನ ಬಂಧನ ಸಾಧ್ಯ ಎಂದು ಜ್ಯೋತಿಷಿಗಳ ಸಂಘದ ಅಧ್ಯಕ್ಷ, ಇಂಡಿಯನ್ ಆಸ್ಟ್ರಾಲಜಿ ಮಾಸ ಪತ್ರಿಕೆಯ ಸಂಪಾದಕ ಗುರುರಾಜ ಉಜ್ಜಯತಿ ಹೇಳಿದ್ದಾರೆ.
ಅವರು ಹಾನಗಲ್ನಲ್ಲಿ ಸೋಮವಾರ ನಡೆದ ಒಂದು ದಿನದ ಜ್ಯೋತಿಷ ಶಾಸ್ತ್ರ ಪಂಡಿತರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ತಮ್ಮ ಮಾತನ್ನು ಸಮರ್ಥಿಸಲು ಅವರು ಇಂದಿರಾಗಾಂಧಿಯನ್ನು ಉದಾಹರಿಸಿದರು. ಆಕೆಯ ಹುಟ್ಟು ಅಪರೂಪದ್ದಾಗಿತ್ತು. ಹಿಂದೆಂದೂ ಇಂತಹ ಜಾತಕ ಇರುವ ಮಹಿಳೆಯಾಬ್ಬಳು ಜನಿಸಿರಲಿಲ್ಲ. ಇಡೀ ದೇಶವನ್ನು ತನ್ನ ಆಣತಿಯಂತೆ ನಡೆಸಿಕೊಂಡು ಹೋಗುವ ಸಾಮರ್ಥ್ಯವನ್ನು ಅವರಿಗೆ ದೈವ ನೀಡಿತ್ತು ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಹೊಸಪೇಟೆ ಕೊಟ್ಟೂರು ಮಠದ ಸ್ವಾಮೀಜಿಗಳು ಜ್ಯೋತಿಷ್ಯಶಾಸ್ತ್ರ ಯಾವತ್ತೂ ಸುಳ್ಳಾಗಿಲ್ಲ. ಆದರೆ ಅರೆ ಜ್ಞಾನದಿಂದಾಗಿ ಜ್ಯೋತಿಷಿಗಳು ಹೇಳಿದ ಭವಿಷ್ಯ ಸುಳ್ಳಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಜ್ಯೋತಿಷ್ಯ ಶಾಸ್ತ್ರ ಎಂಬುದು ಸಂಖ್ಯಾ ಶಾಸ್ತ್ರದ ಆಧಾರದ ಮೇಲೆ ನಿರೂಪಿತವಾದವು. ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ಜನಸಾಮಾನ್ಯರೂ ಸೇರಿದಂತೆ ದೇಶದ ಶೇ 80 ರಷ್ಟು ಮಂದಿ ಜ್ಯೋತಿಷ್ಯ ಶಾಸ್ತ್ರ ದ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ ಎಂದು ಅವರು ವಿವರಿಸಿದರು.
ಗರಗನಾಗಲಾಪುರದ ಸ್ವತಃ ಜ್ಯೋತಿಷಿಯಾಗಿರುವ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ ಹೊಟ್ಟೆ ಪಾಡಿಗಾಗಿ ಜ್ಯೋತಿಷ್ಯವನ್ನು ಅವಲಂಬಿಸುವವರಿಂದಲೇ ಜ್ಯೋತಿಷ್ಯಶಾಸ್ತ್ರದ ಮೇಲೆ ಅಪನಂಬಿಕೆ ಬೆಳೆದಿದೆ ಎಂದು ವಿಷಾದಿಸಿದರು.
(ಇನ್ಫೋ ವಾರ್ತೆ)