ಕರಾವಳಿಯಲ್ಲಿ ಮರು ಹುಟ್ಟು ಪಡೆದ ಪರಿಸರ ದನಿ
ಮಂಗಳೂರು : ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಪರಿಸರವಾದಿಗಳು ಮತ್ತೆ ಜಾಗೃತರಾಗಿದ್ದಾರೆ. ಈ ಬಾರಿ ರಾಷ್ಟ್ರೀಯ ಶಾಖ ವಿದ್ಯುತ್ ಉತ್ಪಾದನಾ ಘಟಕ(ಎನ್ಟಿಪಿಸಿ)ದ ಸರದಿ. ಬ್ರಹ್ಮಾವರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಶಾಖ ವಿದ್ಯುತ್ ಸ್ಥಾವರದ ಭೂಸ್ವಾಧೀನಕ್ಕಾಗಿ ಸರ್ವೆ ಆರಂಭವಾಗಿದ್ದು, ಸ್ಥಳೀಯರು ವಿದ್ಯುತ್ ಸ್ಥಾವರದ ವಿರುದ್ಧ ತಮ್ಮ ಹೋರಾಟ ಆರಂಭಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿನ ಧಾರಣ ಸಾಮರ್ಥ್ಯವನ್ನು ಅಳೆಯುವ ಗೋಜಿಗೇ ಹೋಗದೆ ಯದ್ವಾ ತದ್ವಾ ನುಗ್ಗುತ್ತಿರುವ ಇಂಡಸ್ಟ್ರಿಗಳು ಪ್ರಾದೇಶಿಕ ಹಿತಾಸಕ್ತಿಯನ್ನು ಗಮನಿಸುತ್ತಿಲ್ಲ. ಜೈವಿಕವಾಗಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಧಾರಣ ಸಾಮರ್ಥ್ಯವನ್ನು ಅಳೆಯದೇ ಯಾವುದೇ ಕಂಪೆನಿಗಳು ಆರಂಭವಾಗಬಾರದು ಎಂಬುದು ಉಭಯ ಜಿಲ್ಲೆಗಳ ಪರಿಸರ ಸಂಘಟನೆಗಳ ಆಗ್ರಹ.
‘ನೀರಿ’ ವರದಿ ಓದಿ ಕೈಗಾರಿಕೆ ಸ್ಥಾಪಿಸಲು ಬನ್ನಿ !
ದಕ್ಷಿಣ ಕನ್ನಡ ಪರಿಸರಾಸಕ್ತ ಒಕ್ಕೂಟ ಮತ್ತು ನಾಗರಿಕ ಸೇವಾ ಟ್ರಸ್ಟ್ ನ ನೇತೃತ್ವದಲ್ಲಿ ಪರಿಸರ ಸಂಘಟನೆಗಳು ಎನ್ಟಿಪಿಸಿಯ ವಿರುದ್ಧ ಹೋರಾಟ ಆರಂಭಿಸಿವೆ. ಈ ಹಿಂದೆ ಕೊಜೆಂಟ್ರಿಕ್ಸ್ ಇಲ್ಲಿನವರನ್ನು ಸಾಕಷ್ಟು ಕಾಡಿಸಿತ್ತು. ಆ ಸಂದರ್ಭದಲ್ಲಿ ನಾಗಪುರ ಮೂಲದ ರಾಷ್ಟ್ರೀಯ ಪರಿಸರ ತಂತ್ರಜ್ಞಾನ ಅಧ್ಯಯನ ಸಮಿತಿ(ನೀರಿ)ಯ ವರದಿಯು ಈ ಪ್ರದೇಶದಲ್ಲಿ ಇನ್ನು ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಿದಲ್ಲಿ ಪರಿಸರಕ್ಕೆ ಧಕ್ಕೆಯುಂಟಾಗುವುದಾಗಿ ಹೇಳಿತ್ತು. ಆ ಸಮಿತಿಯ ವರದಿ ಈಗ ಸ್ಥಾಪಿಸಲು ಉದ್ದೇಶಿಸಲಾಗಿರುವ ಎನ್ಟಿಪಿಸಿ ಸ್ಥಾವರಕ್ಕೂ ಅನ್ವಯಿಸುತ್ತದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.
ಪರಿಸರ ಸಂಘಟನೆಯ ಹೋರಾಟದ ಮುಂಚೂಣಿಯಲ್ಲಿ ಶಂಪಾ ದೈತೋಟ, ಕೆ. ಸೋಮನಾಥ ನಾಯಕ್, ಪಿಆರ್. ಯಶೋಚಂದ್ರ ಮುಂತಾದವರಿದ್ದಾರೆ. ಅವರ ಪ್ರಕಾರ ಈಗಾಗಲೇ ಭೂಸ್ವಾಧೀನಕ್ಕಾಗಿ ಸರ್ವೆ ಆರಂಭಿಸಿರುವ ಎನ್ಟಿಪಿಸಿಯನ್ನು ಮುಂದುವರೆಯಲು ಗ್ರಾಮಸ್ಥರು ಶತಾಯಗತಾಯ ಬಿಡುವುದಿಲ್ಲ. ಧಾರಣ ಸಾಮರ್ಥ್ಯದ ವರದಿ ಬಂದನಂತರವಷ್ಟೇ ಕೈಗಾರಿಕೆಯ ಮಾತೆತ್ತಬಹುದು.
ಸಾಗಿ ಬಂದ ಹೋರಾಟ ...
ಕರಾವಳಿಯವರು ತಮ್ಮ ಜೀವ ವೈವಿಧ್ಯ ಪರಿಸರವನ್ನು ಉಳಿಸಿಕೊಳ್ಳಲು ಹಿಂದೆಯೂ ಸಾಕಷ್ಟು ಹೋರಾಡಿದ್ದರು. ವಿಶಾಲ ಸಮುದ್ರ ತೀರ ಮತ್ತು ಪಶ್ಚಿಮ ಘಟ್ಟದ ನಡುವೆ ಇರುವ ಈ ಪ್ರದೇಶದಲ್ಲಿ ಈಗಾಗಲೇ ಸಾಕಷ್ಟು ಕಂಪನಿಗಳು ತಲೆಯೆತ್ತಿವೆ. ಎಂಆರ್ಪಿಎಲ್ನಂತಹ ಪರಿಸರ ಮಾಲಿನ್ಯ ಸಂಪನ್ಮೂಲ ಕಂಪೆನಿಗಳು ಕರಾವಳಿ ಮೀನುಗಾರರ ವಿರೋಧದ ನಡುವೆಯೇ ಆರಭವಾಗಿದ್ದು ಇತಿಹಾಸ. ಒಂದು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಹೊಂದಿದ್ದ ಕೊಜೆಂಟ್ರಿಕ್ಸ್ ಕೂಡ ಕಾರ್ಕಳದ ‘ಇನ್ನ’ ಬಳಿ ಆರಂಭವಾಗಬೇಕಿತ್ತು. ಆಗ ಗ್ರಾಮಸ್ಥರು ಅಪರಿಚಿತರು ಯಾರೇ ಬಂದರೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿದ್ದರು. ಹಳ್ಳಿ ಮುಖಂಡರ ಅನುಮತಿ ಇಲ್ಲದೆ ಅಪರಿಚಿತರು ಗ್ರಾಮದೊಳಕ್ಕೆ ಬರುವಂತಿರಲಿಲ್ಲ. ಕೊನೆಗೂ ಪರಿಸರವಾದಿಗಳ ಅದೃಷ್ಟವಶಾತ್ ಕೊಜೆಂಟ್ರಿಕ್ಸ್ ಹಿಂದಕ್ಕೆ ಸರಿಯಿತು. ಈ ಎಲ್ಲ ಹೋರಾಟಗಳಿಂದ ರಿಲ್ಯಾಕ್ಸ್ ಆಗುವ ಮುನ್ನವೇ ಈಗ ಧುತ್ತೆಂದು ಬಂದು ಎನ್ಟಿಪಿಸಿ ನಿಂತಿದೆ.
ಧಾರಣ ಸಾಮರ್ಥ್ಯ ವರದಿಯ ಗೋಳು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಧಾರಣ ಸಾಮರ್ಥ್ಯಅಧ್ಯಯನಕ್ಕಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲು
ಪ್ರೊ. ಮಾಧವ್ ಗಾಡ್ಗೀಳ್ ಅವರನ್ನು ಸರಕಾರ ಕೇಳಿಕೊಂಡಿತ್ತು. ಗಾಡ್ಗೀಳ್ ಅವರು ಪ್ರಾಥಮಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ವರ್ಷಗಳೇ ಕಳೆದಿದ್ದರೂ ಆ ಬಗ್ಗೆ ಮುಂದಿನ ಕ್ರಮಗಳ ಬಗ್ಗೆ ಪ್ರಸ್ತಾಪಗಳೇ ಬಂದಿಲ್ಲ.
(ಮಂಗಳೂರು ಪ್ರತಿನಿಧಿಯಿಂದ)