ನೇಪಾಳ: ಮರೆಯುವ ಮುನ್ನಮರುಕಳಿಸಿದ ಭಾವೋದ್ರೇಕ
ಕಠ್ಮಂಡು : ರಾಜ ಕುಟುಂಬದ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ನೇಪಾಳ ಆಚರಿಸುತ್ತಿರುವ ಶೋಕಾಚರಣೆಯ ಅಂತಿಮ ದಿನ- ಸೋಮವಾರ (ಜೂನ್ 11), ದೇಶಾದ್ಯಂತ ಜನತೆಯಲ್ಲಿ ಭಾವುಕ ವಾತಾವರಣ ಮರುಕಳಿಸಿದೆ. ಈ ನಡುವೆ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿ ತನ್ನ ವಿಚಾರಣೆಯನ್ನು ಮುಂದುವರಿಸಿದೆ.
ಬಗ್ಮತಿ ನದಿ ದಂಡೆಯಲ್ಲಿ ನಡೆಯುವ 11 ನೇ ದಿನದ ವಿಧಿಗಳನ್ನು ಪೂರೈಸುವ ಕಾರ್ಯಕ್ರಮದಲ್ಲಿ ರಾಜ ಕುಟುಂಬದ ಸದಸ್ಯರು ಹಾಗೂ ಸಚಿವ ಸಂಪುಟದ ಸದಸ್ಯರು ಭಾಗವಹಿಸುವರು. ಪಛಾಲಿಘಾಟ್ನ ಫರೀಬ್ಸ್ಥಾನ್ ಟೆಂಪಲ್ನಲ್ಲಿ ನಡೆಯುವ ಇನ್ನೊಂದು ಕಾರ್ಯಕ್ರಮದಲ್ಲಿ ಅಗಲಿದ ಆತ್ಮಗಳಿಗೆ ಶಾಂತಿ ಕೋರಲಾಗುವುದು. ಈ ಕಾರ್ಯಕ್ರಮದ ಕೊನೆ ನಿಮಿಷದ ಸಿದ್ಧತೆಗಳು ನಡೆಯುತ್ತಿವೆ.
ಶೋಕಾಚರಣೆಯ ಅಂತಿಮ ದಿನ ಉಂಟಾಗಬಹುದಾದ ಭಾವಾತಿರೇಕ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಕಠ್ಮಂಡುವಿನಲ್ಲಿ ವ್ಯಾಪಕ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಅರಮನೆ ಮುಂಭಾಗದಲ್ಲಿ ಇರಿಸಿರುವ ಶೋಕ ಸಂದೇಶ ನಮೂದಿಸುವ ಪುಸ್ತಕದಲ್ಲಿ ವಿದೇಶಿಯರು ಹಾಗೂ ಸ್ಥಳೀಯರು ತಮ್ಮ ಸಂದೇಶಗಳನ್ನು ಬರೆಯುವ ಅವಧಿಯನ್ನು ಆಡಳಿತ ವಿಸ್ತರಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...