ಶಿಡ್ಲಘಟ್ಟದಲ್ಲಿ ಜೀತ ಪತ್ತೆ : ನಾಲ್ವರು ಬಾಲಕರು ಪಾರು
ಶಿಡ್ಲಘಟ್ಟ : ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ಸಂಪತ್ಕುಮಾರ್ ಹಾಗೂ ಸಿಬ್ಬಂದಿ ತಾಲೂಕಿನ ಮೇಲೂರು ಗ್ರಾಮದಲ್ಲಿ ನಾಲ್ವರು ಜೀತದಾಳುಗಳನ್ನು ಪಾರು ಮಾಡಿದ್ದಾರೆ.
ಅನಾಮಧೇಯ ಫೋನು ಕರೆಯಾಂದರ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದಾಗ, ಮೇಲೂರಿನಲ್ಲಿ ನಾರಾಯಣ (6), ಮಣಿ (8), ಮಾರಿಮುತ್ತು (10) ಹಾಗೂ ಮುನಿ ನಾರಾಯಣ (12) ಎಂಬ ಮಕ್ಕಳು ಪಳ್ಳಿಗರ ನಾರಾಯಣ ಸ್ವಾಮಿ ಎಂಬುವರ ಮನೆಯಲ್ಲಿ ಜೀತಕ್ಕಿದ್ದುದು ಪತ್ತೆಯಾಗಿದೆ. ಹಲವು ವರ್ಷಗಳ ಹಿಂದೆ ಮೇಲೂರಿನ ಬಳಿ ಬಿದಿರು ಹೆಣೆಯುವ ಕೆಲಸ ಪ್ರಾರಂಭಿಸಲು ತಮಿಳುನಾಡಿನ ಪಣೆಸ್ವಾಮಿ ಎಂಬಾತ ನಾರಾಯಣ ಸ್ವಾಮಿ ಅವರಿಂದ 3 ಸಾವಿರ ರುಪಾಯಿ ಸಾಲ ಪಡೆದ. ಅದನ್ನು ತೀರಿಸಲಾರದ ಕಾರಣ ತನ್ನ ಮಕ್ಕಳಾದ ನಾರಾಯಣ ಹಾಗೂ ಮಣಿಯನ್ನು ಒತ್ತಾಯದಿಂದ ಜೀತಕ್ಕೆ ಹಚ್ಚಿದ.
ರಾಮಸ್ವಾಮಿ ಹಾಗೂ ಸಂಧ್ರ ಎಂಬುವರೂ ಪಣೆಸ್ವಾಮಿಯ ಹಾದಿಯನ್ನೇ ಹಿಡಿದರು. ಇವರು ಜೀತಕ್ಕೆ ಹಾಕಿದ್ದು ಮೊಮ್ಮಗ ನಾರಾಯಣಸ್ವಾಮಿಯನ್ನು. ಮೇಲೂರಿನ ಕೆಂಪೇಗೌಡರ ತೋಟದಲ್ಲಿ ಕೆಲಸ ಮಾಡುತ್ತಿರುವ ವೆಂಕಟರಮಣಪ್ಪ ಎಂಬುವರು ನಾರಾಯಣ ಸ್ವಾಮಿ ಅವರಿಂದ ಪಡೆದ ಸಾಲದ ಬಡ್ಡಿ- ಚಕ್ರಬಡ್ಡಿ ತೀರಿಸಲಾರದೆ ವರ್ಷಕ್ಕೆ 1 ಸಾವಿರ ರುಪಾಯಿ ಸಂಬಳಕ್ಕೆ ತಮ್ಮ ಮಗ ಮುನಿ ನಾರಾಯಣನನ್ನು ಜೀತಕ್ಕೆ ಕಳುಹಿಸಿದರು.
ಈ ಎಲ್ಲಾ ಮಕ್ಕಳನ್ನು ತನ್ನ ಮನೆಯ ವಿಶಾಲವಾದ ಆವರಣದಿಂದ ಹೊರ ಹೋಗಲು ನಾರಾಯಣಸ್ವಾಮಿ ಬಿಡುತ್ತಿರಲಿಲ್ಲ. ಕಾಂಪೌಂಡ್ ದಾಟಿ ಹೋಗದಂತೆ ತಾಕೀತು ಮಾಡಿದ್ದ. ಹೋಗಲು ಯತ್ನಿಸಿದರೆ ದಂಡಿಸುತ್ತಿದ್ದ. 50 ಹಂದಿ, 40 ಕೋಳಿ, 15 ಸೀಮೆ ಹಸುಗಳನ್ನು ಜೀತಕ್ಕಿದ್ದ ಮಕ್ಕಳು ಪಾಲನೆ ಮಾಡಬೇಕಿತ್ತು. ಮಕ್ಕಳು ಮಾನಸಿಕ ಹಾಗೂ ದೈಹಿಕ ಯಾತನೆ ಅನುಭವಿಸುತ್ತಿದ್ದರು ಎಂದು ಪೊಲೀಸರು ವಿವರಿಸಿದರು.
(ಇನ್ಫೋ ವಾರ್ತೆ)