ಬೆಂಗಳೂರನ್ನು ಮೆಟ್ರೋಸಿಟಿಯಾಗಿ ಪರಿವರ್ತಿಸಲು ನಿರ್ಧಾರ
ಬೆಂಗಳೂರು: ಬೆಂಗಳೂರು ನಗರವನ್ನು ಮೆಟ್ರೋ ಸಿಟಿಯಾಗಿ ಪರಿವರ್ತಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಬೆಂಗಳೂರು ಹೊರವಲಯದಲ್ಲಿರುವ ಏಳು ನಗರಸಭೆಗಳನ್ನೂ ಸೇರಿಸಿಕೊಂಡು ಬೆಂಗಳೂರನ್ನು ಮೆಟ್ರೋ ನಗರವನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.
ಈ ಕಾರ್ಯಕ್ಕಾಗಿ ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಪಟ್ಟಣಗೆರೆ, ಕೆ.ಆರ್. ಪುರಂ, ಮಹದೇವಪುರ ನಗರಸಭೆಗಳು ಹಾಗೂ ಕೆಂಗೇರಿ ಪಟ್ಟಣ ಪಂಚಾಯ್ತಿಗಳನ್ನು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ವಿಲೀನಗೊಳಿಸಲು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.
ಮೆಟ್ರೋ ಸಿಟಿ ಎಂಬುದು ಹೇಗಿರಬೇಕು. ಅದರ ಪರಿಕಲ್ಪನೆಗಳು ಏನು? ಎಂಬ ಬಗ್ಗೆ ಚಿಂತನೆ ನಡೆಸಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ. ಚಂದ್ರೇಗೌಡ ಅವರ ನೇತೃತ್ವದಲ್ಲಿ ಸಂಪುಟದ ಉಪಸಮಿತಿ ರಚಿಸಲಾಗಿದೆ.
ಸಚಿವರುಗಳಾದ ಪ್ರೊ. ಬಿ.ಕೆ. ಚಂದ್ರಶೇಖರ್, ಡಿ.ಕೆ. ಶಿವಕುಮಾರ್, ಚಿಮ್ಮನಕಟ್ಟಿ, ಎ. ಕೃಷ್ಣಪ್ಪ ಅವರು ಸಮಿತಿಯ ಸದಸ್ಯರಾಗಿದ್ದಾರೆ. ಚಂದ್ರೇಗೌಡರ ನೇತೃತ್ವದಲ್ಲಿ ಈಗಾಗಲೇ ಚಿಂತನ- ಮಂಥನ ನಡೆಸುತ್ತಿರುವ ಸಮಿತಿಯು 15 ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಉನ್ನತ ಮಟ್ಟದ ಮೂಲಗಳು ತಿಳಿಸಿವೆ.