ಶಸ್ತ್ರಚಿಕಿತ್ಸೆಯಲ್ಲಿ ಅನಸ್ತೇಶಿಯಾ ಬದಲಿಗೆ ಹಿಪ್ನಾಟಿಸಂ - ಪಿ.ಸಿ.ಸರ್ಕಾರ್
ಕೋಲ್ಕತಾ : ಶಸ್ತ್ರಚಿಕಿತ್ಸೆಗೆ ಮುನ್ನ ನೀಡುವ ‘ಅನಸ್ತೇಶಿಯಾ’ಕ್ಕೆ ಪರ್ಯಾಯವಿದೆಯಾ ? ಹೌದೆನ್ನುತ್ತಾರೆ ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರ ಪಿ.ಸಿ. ಸರ್ಕಾರ್ (ಜ್ಯೂನಿಯರ್). ಅನಸ್ತೇಶಿಯಾ ಜಾಗೆಯಲ್ಲಿ ‘ಹಿಪ್ನಾಟಿಸಂ’ ಬಳಸುವ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ಸಾಧ್ಯ ಎನ್ನುವುದು ಅವರ ಅಭಿಪ್ರಾಯ.
ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರನ್ನು ಬುಧವಾರ (ಜೂನ್ 7) ರೈಟರ್ಸ್ ಭವನದಲ್ಲಿ ಭೇಟಿ ಮಾಡಿ ಮಾತನಾಡುತ್ತಿದ್ದ ಸರ್ಕಾರ್- ಅನಸ್ತೇಶಿಯಾಗೆ ಪರ್ಯಾಯವಾಗಿ ಹಿಪ್ನಾಟಿಸಂ ಬಳಸುವ ತಮ್ಮ ಯೋಜನೆಯನ್ನು ಹಂಚಿಕೊಂಡರು. ಯಾವುದೇ ಶಸ್ತ್ರಚಿಕಿತ್ಸೆಗೆ ಹಿಪ್ನಾಟಿಸಂ ಬಳಸುವ ಮುನ್ನ , ಉದ್ದಿಶ್ಯದ ಕುರಿತ ವಿವರವಾದ ಪ್ರಸ್ತಾವನೆಯನ್ನು ಆರೋಗ್ಯ ಸಚಿವ ಸೂರಜ್ ಕಾಂತ ಮಿಶ್ರ ಅವರಿಗೆ ಸಲ್ಲಿಸುವುದಾಗಿ ಅವರು ಹೇಳಿದರು.
ಜಾದೂ ಕುರಿತಂತೆ ದೇಶದಲ್ಲಿ ಸ್ನಾತಕೋತ್ತರ ಡಿಪ್ಲೊಮ ಶಿಕ್ಷಣವನ್ನು ಪರಿಚಯಿಸಲು ಜಾದೂಗಾರರ ಸಂಘಟನೆ ನಿರ್ಧರಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದ ನೆರವನ್ನು ಕೋರಲು ನಿರ್ಧರಿಸಿದ್ದೇವೆ ಎಂದು ಸರ್ಕಾರ್ ತಿಳಿಸಿದರು.