ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷಿದ್ಧ : ಕೃಷ್ಣ ಘೋಷಣೆ
ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ರಾಜ್ಯ ಸರಕಾರ ನಿಷೇಧಿಸಿರುವುದಾಗಿ ಶುಕ್ರವಾರ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರಕಟಿಸಿದ್ದಾರೆ. ನಿಷೇಧವನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು, ಕಾನೂನಿಗೆ ಹೆಚ್ಚು ಬಲ ನೀಡುವ ಇಲ್ಲವೇ ಹೊಸ ಕಾಯಿದೆಯನ್ನೇ ಮಾಡುವುದಾಗಿ ಅವರು ಹೇಳಿದರು.
ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸರಕಾರದ ಈ ಆದೇಶವನ್ನು ಉಲ್ಲಂಘಿಸುವವರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಈಗಿರುವ ಕಾಯ್ದೆಗೆ ತಿದ್ದುಪಡಿ ತರಲು ಚಿಂತಿಸಲಾಗುತ್ತಿದೆ ಎಂದರು.
ನೇರ ಧೂಮಪಾನಕ್ಕಿಂತಲೂ ಮತ್ತೊಬ್ಬರು ಬಿಡಿ, ಸಿಗರೇಟ್ ಸೇದಿ ಬಿಡುವ ಹೊಗೆ ಸೇವನೆ (ಪ್ಯಾಸ್ಯು ಸ್ಮೋಕಿಂಗ್)ಯೇ ಹೆಚ್ಚು ಅಪಾಯಕಾರಿ. ವಿದೇಶಗಳಲ್ಲಿ ಪ್ಯಾಸ್ಯೂ ಸ್ಮೋಕಿಂಗ್ನಿಂದ ಹಾನಿಗೊಳಗಾದವರು ನ್ಯಾಯಾಲಯದ ಮೊರೆ ಹೋಗಿ ಪರಿಹಾರವನ್ನೂ ಪಡೆಯುತ್ತಾರೆ ಎಂದೂ ಅವರು ಹೇಳಿದರು.
ವಿಮಾನಗಳಲ್ಲಿ ಕೂಡ ಧೂಮಪಾನ ನಿಷೇಧಿಸಲಾಗಿದೆ. ಸಾರಿಗೆ ಬಸ್ಗಳು, ರೈಲಿನಲ್ಲಿ ಕೂಡ ಧೂಮಪಾನ ನಿಷಿದ್ಧ ಆದರೂ ಜನ ಧೂಮಪಾನ ಮಾಡುತ್ತಾರೆ. ಇದನ್ನು ತಡೆಗಟ್ಟಲು ಕಾಯ್ದೆಯನ್ನು ಬಲಪಡಿಸುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು.
ಪರಿಸರ ಶ್ರೀ ಪ್ರಶಸ್ತಿ: ಪರಿಸರ ಉಳಿಸಲು ಹೋರಾಡುವ ಹಾಗೂ ಪರಿಸರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಮುಂದಿನ ಸಾಲಿನಿಂದ ಪರಿಸರ ಶ್ರೀ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಯನ್ನು ಅರಣ್ಯ ಹಾಗೂ ಪರಿಸರ ಇಲಾಖೆ ವತಿಯಿಂದ ಕೊಡಮಾಡಲಾಗುವುದು ಎಂದೂ ಕೃಷ್ಣ ಹೇಳಿದರು.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಪ್ರತಿಯಾಬ್ಬ ನಾಗರಿಕರೂ ಸಹಕರಿಸಬೇಕು ಎಂದು ಕೋರಿದರು. ಸಮಾರಂಭದಲ್ಲಿ ಸಚಿವ ಕೆ.ಎಚ್. ರಂಗನಾಥ್, ಎಚ್.ಕೆ. ಪಾಟೀಲ್, ಮಂಡಳಿ ಅಧ್ಯಕ್ಷ ಉಪೇಂದ್ರ ತ್ರಿಪಾಠಿ ಮೊದಲಾದವರು ಹಾಜರಿದ್ದರು.
(ಯು.ಎನ್.ಐ/ ಇನ್ಫೋ ವರದಿ).
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...