ಸಹಕಾರಕ್ಕೆ ಮಾಲ್ಡೀವ್ಸ್ನೊಂದಿಗೆ ಕೈ ಜೋಡಿಸಿದ ‘ಸಿಐಐಎಲ್’
ಮೈಸೂರು : ಮಾಲ್ಡೀವ್ಸ್ನ ಮಾನವ ಸಂಪನ್ಮೂಲ, ಉದ್ಯೋಗ ಹಾಗೂ ಕಾರ್ಮಿಕ ಸಚಿವ ಅಬ್ದುಲ್ಲಾ ಕಮಾಲುದ್ದೀನ್ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ (ಸಿಐಐಲ್)ಗೆ ಇತ್ತೀಚೆಗೆ ಭೇಟಿ ನೀಡಿ, ಘಟಕದ ಕಾರ್ಯವ್ಯಾಪ್ತಿಯ ಅಧ್ಯಯನ ನಡೆಸಿದರು.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಡಾ. ಮುರಳೀ ಮನೋಹರ್ ಜೋಶಿ ಅವರ ಆಮಂತ್ರಣದ ಮೇರೆಗೆ ಕಮಲುದ್ದೀನ್ ಭಾರತಕ್ಕೆ ಆಗಮಿಸಿದ್ದ ರು. ಮೈಸೂರು ಸಿಐಐಎಲ್ ಭೇಟಿ ಅವರ ಭಾರತ ಪ್ರವಾಸದ ಒಂದು ಭಾಗವಾಗಿತ್ತು. ಈ ಸಂದರ್ಭದಲ್ಲಿ ಸಿಐಐಎಲ್ನ ನಿರ್ದೇಶಕ ಡಾ. ಉದಯ ನಾರಾಯಣ ಸಿಂಗ್, ಘಟಕದ ಕಾರ್ಯ ನಿರ್ವಹಣೆಯ ಬಗ್ಗೆ ಕಮಾಲುದ್ದೀನ್ ಅವರಿಗೆ ವಿವರಿಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಭಾಷಾ ವಿಷಯದಲ್ಲಿ ಸಲಹೆ ನೀಡುವುದು, ಎಲ್ಲ ಭಾರತೀಯ ಭಾಷೆ ಹಾಗೂ ಆ ಭಾಷೆಗಳಲ್ಲಿನ ಮೂಲದ್ರವ್ಯಗಳ ಅಭಿವೃದ್ಧಿ , ಹಿಂದುಳಿದ ಭಾಷೆಗಳ ಸಂರಕ್ಷಣೆ ಮತ್ತು ಬೆಳವಣಿಗೆಯತ್ತ ಗಮನ ಹರಿಸುವುದು, ಭಾಷಾ ಸಾಮರಸ್ಯಕ್ಕೆ ಪ್ರೋತ್ಸಾಹ, ಮಾತೃ ಭಾಷೆಯ ಹೊರತಾಗಿ ಇತರ ಭಾಷೆಗಳನ್ನು ಕಲಿಯಲಿಚ್ಚಿಸುವವರಿಗೆ 15 ಭಾಷೆಗಳನ್ನು ಕಲಿಸುವ ವಿಸ್ತಾರ ಅವಕಾಶ ನೀಡುವ ಘಟಕದ ಮೂಲ ಉದ್ದೇಶಗಳನ್ನು ಕಮಾಲುದ್ದೀನ್ ಅವರಿಗೆ ವಿವರಿಸಲಾಯಿತು.
ಜೊತೆಗೆ ಸಿಐಐಎಲ್ ತೆಗೆದುಕೊಳ್ಳಬಹುದಾದ ಮುಂದಿನ ಹೆಜ್ಜೆಗಳ ಬಗ್ಗೆಯೂ ಉದಯ ನಾರಾಯಣ್ ತಿಳಿಸಿಕೊಟ್ಟರು.
- ಮಾಲ್ಡೀವ್ಸ್ನ 200 ದ್ವೀಪ ಪ್ರದೇಶಗಳಲ್ಲಿನ ಭಾಷೆಗಳ ಸರ್ವೆ
- ಭಾರತೀಯ ಆಡು ಭಾಷೆಗಳ ಅಧ್ಯಯನ
- ಜನಪದ ಮತ್ತು ಪಾರಿಭಾಷಿಕ ಅಧ್ಯಯನ
- ಸಾಂಸ್ಕೃತಿಕ ದಾಖಲೀಕರಣ
- ಧಿವೇಹಿ ಮತ್ತು ಆಡು ಭಾಷೆಗಳ ನಡುವೆ ಸಂಪರ್ಕ ಸಾಮಾಗ್ರಿ ನಿರ್ಮಾಣ
- ಧಿವೇಹಿ ಮತ್ತು ಇಂಗ್ಲಿಷ್ ನಡುವಣ ಸಂಪರ್ಕಕ್ಕಾಗಿ ಭಾಷಾ ಸೂಚನ ಸಾಮಾಗ್ರಿಗಳ ರಚನೆ
- ಅಧ್ಯಾಪನ ಮತ್ತು ಪರೀಕ್ಷಾ ವಿಧಾನಗಳ ಕುರಿತಂತೆ ಬೋಧಕ ವರ್ಗಕ್ಕೆ ಕೋರ್ಸ್ಗಳನ್ನು ನಡೆಸುವುದು.
- ಆಸಕ್ತ ವಿದ್ಯಾರ್ಥಿಗಳಿಗೆ ಇಂಟರ್ನ್ಷಿಪ್ಗೆ ಹಾಗೂ ಅಧ್ಯಯನಕ್ಕೆ ಅವಕಾಶ ಒದಗಿಸುವುದು.
ಘಟಕದ ಕಾರ್ಯಚಟುವಟಿಕೆಗಳನ್ನು ಗಮನಿಸಿದ ಕಮಾಲುದ್ದೀನ್, ಮಾಲ್ಡಿವ್ಸ್ನಲ್ಲೂ ಸಿಐಐಎಲ್ ತನ್ನ ಕಾರ್ಯಯೋಜನೆಯನ್ನು ವಿಸ್ತರಿಸುವ ವಿಷಯವನ್ನು ಗಂಭೀರವಾಗಿ ಪರಿಣಿಸುವುದಾಗಿ ಹೇಳಿದರು. ಭಾಷಾ ಅಧ್ಯಯನ, ಭಾಷಾ ಶಿಕ್ಷಣ ಮತ್ತು ವಿದೇಶೀ ಭಾಷಾ ಕಲಿಕೆಗೆ ಸಂಬಂಧಿಸಿ ಸಿಐಐಎಲ್ನ ತಜ್ಞರೊಂದಿಗೆ ಮಾಲ್ಡೀವ್ಸ್ನಲ್ಲಿ ಉತ್ತಮ ಶೈಕ್ಷಣಿಕ ಭೂಮಿಕೆಯನ್ನು ನಿರ್ಮಿಸುವ ತಮ್ಮ ಆಸೆಯನ್ನು ವ್ಯಕ್ತಪಡಿಸಿ, ಧಿವೇಹಿ ಮತ್ತು ಇಂಗ್ಲಿಷ್ ಭಾಷೆ ಮಾತ್ರ ಮಾಲ್ಡಿವ್ಸ್ನಲ್ಲಿ ಹೆಚ್ಚು ಪ್ರಚಲಿತವಾಗಿದ್ದರೂ, ಅಲ್ಲಿನ ಸಮಾಜ ಭಾಷಾ ವಿಜ್ಞಾನದ ಅಧ್ಯಯನ ಆಸಕ್ತಿದಾಯಕವಾದುದು ಎಂದರು.
ಮಾಲ್ಡೀವ್ಸ್ನ ಮಾನವ ಸಂಪನ್ಮೂಲ ವಿಭಾಗದ ಸಹ ನಿರ್ದೇಶಕ ಇಬ್ರಾಹಿಂ ಹಸನ್ ಮಾಲ್ಡಿವ್ಸ್ನಲ್ಲಿ ಪಠ್ಯ ಪುಸ್ತಕ ಮತ್ತು ಭಾಷಾ ಶಿಕ್ಷಣದ ಬಗೆಗೆ ತಮ್ಮ ಅನುಭವವನ್ನು ಸಿಐಐಎಲ್ನ ಸಿಬ್ಬಂದಿ ಜೊತೆ ಹಂಚಿಕೊಂಡರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...