ಅನಿವಾಸಿ ಕನ್ನಡಿಗರಿಗೆ ವಂಚನೆ : ಮೀನಾಕ್ಷಿ ಟಾಯ್ಸ್ ವಿರುದ್ಧ ದೂರು
ಚನ್ನಪಟ್ಟಣ : ಬಣ್ಣದ ಬೊಂಬೆ ಹಾಗೂ ಆಟಿಕೆಗಳಿಗೆ ಹೆಸರಾದ ಚನ್ನಪಟ್ಟಣದಲ್ಲಿರುವ ಬೊಂಬೆಗಳ ಮಾರಾಟದ ಅಂಗಡಿಯಾಂದರ ಮಾಲಿಕರು ಹಾಗೂ ಇತರ ಇಬ್ಬರು ತಮಗೆ ಮೋಸ ಮಾಡಿರುವರೆಂದು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಅನಂತ್ಕೃಷ್ಣ ಎನ್ನುವವರು ಚನ್ನಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನನ್ವಯ ಕಾರ್ಯಪ್ರವೃತ್ತರಾದ ಟೌನ್ ಪೊಲೀಸರು ಹಮೀದ್ ಎನ್ನುವವರನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಅಂಗಡಿಯ ಮಾಲಿಕ ಹಾಗೂ ಮತ್ತೊಬ್ಬ ವ್ಯಕ್ತಿಗಾಗಿ ಶೋಧ ಮುಂದುವರಿದಿದೆ.
ಈಗ್ಗೆ ಮೂರು ವರ್ಷಗಳ ಹಿಂದೆ ತಮ್ಮ ತವರು ರಾಜ್ಯಕ್ಕೆ ಬಂದಿದ್ದ ಕ್ಯಾಲಿಫೋರ್ನಿಯಾದ ಅನಂತ್ಕೃಷ್ಣ ಅವರು ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಚನ್ನಪಟ್ಟಣದ ಮೀನಾಕ್ಷಿ ಟಾಯ್ಸ್ ಎಂಪೋರಿಯಂನಲ್ಲಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಗೀತೋಪದೇಶ ಮಾಡುತ್ತಿರುವ ಕೆತ್ತನೆಯುಳ್ಳ ಕಲಾಕೃತಿಯನ್ನು ಖರೀದಿಸಿದ್ದರು.
ಅಂಗಡಿಯ ಮಾಲಿಕರಾದ ಅಂಕುಗೌಡ ಅಲಿಯಾಸ್ ಆನಂದ್ ಎನ್ನುವವರು, ಈ ಕಲಾಕೃತಿಯನ್ನು ನೇರವಾಗಿ ಕ್ಯಾಲಿಫೋರ್ನಿಯಾಗೇ ಕಳುಹಿಸುವುದಾಗಿ ತಿಳಿಸಿ, ಕಲಾಕೃತಿಯ ಮೌಲ್ಯ ಹತ್ತು ಸಾವಿರ ರುಪಾಯಿ ಹಾಗೂ ಅಂಚೆ ವೆಚ್ಚ (ಪಾರ್ಸಲ್) 2,200 ರುಪಾಯಿ ಪಡೆದರು. ವರ್ಷಗಳೇ ಕಳೆದರೂ ಕಲಾಕೃತಿ ಅನಂತಕೃಷ್ಣ ಅವರಿಗೆ ತಲುಪಲಿಲ್ಲ.
ಈ ಬಗ್ಗೆ ಮೈಸೂರಿನಲ್ಲಿರುವ ಅನಂತಕೃಷ್ಣರ ಸೋದರ ಅಂಗಡಿಯ ಮಾಲಿಕರನ್ನು ಹಲವು ಬಾರಿ ವಿಚಾರಿಸಿದರೂ ಪ್ರಯೋಜನ ಆಗಲಿಲ್ಲ. ಮೂರು ವರ್ಷಗಳ ತರುವಾಯ ರಾಜ್ಯಕ್ಕೆ ಬಂದ ಅನಂತಕೃಷ್ಣ ತಾವೇ ಸ್ವತಃ ಅಂಗಡಿಯ ಮಾಲಿಕರ ಬಳಿ ಹೋಗಿ ವಿಚಾರಿಸಿದಾಗ ಅಂಗಡಿಯ ಮಾಲಿಕ ಜಗಳಕ್ಕೇ ನಿಂತರು.
ಈ ಸಂಬಂಧ ಅವರು ಟೌನ್ ಪೊಲೀಸರಿಗೆ ದೂರು ನೀಡಿದ್ದು, ಹಮೀದ್ ಎಂಬುವವನ್ನು ಬಂಧಿಸಲಾಗಿದೆ. ಅಂಗಡಿ ಮಾಲಿಕ ಆನಂದ್ ಹಾಗೂ ಜಯರಾಮ್ ಎನ್ನುವವರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬಾಲಕೃಷ್ಣ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.