ಮತ್ತೆ ಶಾಂತಿಭಂಗ : ಕಠ್ಮಂಡುವಿನಲ್ಲಿ ಕರ್ಫ್ಯೂ ಮರು ಹೇರಿಕೆ
ಕಠ್ಮಂಡು : ಏಳು ಗಂಟೆಗಳ ಸಡಿಲಿಕೆಯ ನಂತರ, ಮಂಗಳವಾರ ಮಧ್ಯಾಹ್ನ ರಾಜಧಾನಿಯಲ್ಲಿ ಕರ್ಫ್ಯೂವನ್ನು ಮತ್ತೆ ಹೇರಲಾಗಿದೆ. ನಗರದಲ್ಲಿ ಉದ್ರಿಕ್ತ ಸ್ಥಿತಿ ಮುಂದುವರಿದಿದ್ದು, ಅರಮನೆ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿರುವ ವರದಿಗಳು ಬಂದಿವೆ.
ಮಂಗಳವಾರ ಮಧ್ಯರಾತ್ರಿಯವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ. ಜೀವಹಾನಿ- ಆಸ್ತಿಹಾನಿಯನ್ನು ತಡೆಗಟ್ಟಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸುವ ದೃಷ್ಟಿಯಿಂದ ಮುಂಜಾಗರೂಕತಾ ಕ್ರಮವಾಗಿ ಕರ್ಫ್ಯೂ ಮರು ಹೇರಲಾಗಿದೆ ಎಂದು ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಸೋಮವಾರ ವಿಧಿಸಲಾಗಿದ್ದ ಕರ್ಫ್ಯೂವನ್ನು ಮಂಗಳವಾರ ಮುಂಜಾನೆ ಸಡಿಲಿಸಲಾಗಿತ್ತು . ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ, ರಸ್ತೆ ತಡೆ ಮುಂತಾದ ಶಾಂತಿ ಭಂಗ ಚಟುವಟಿಕೆಗಳಲ್ಲಿ ತೊಡಗಿದರು. ಇದರಿಂದಾಗಿ ಕರ್ಫ್ಯೂ ಮರು ಹೇರಿಕೆ ಅನಿವಾರ್ಯವಾಯಿತು ಎಂದು ಪ್ರಕಟಣೆ ತಿಳಿಸಿದೆ.
ಈ ನಡುವೆ ಕಠ್ಮಂಡುವಿನಲ್ಲಿ ಉದ್ರಿಕ್ತ ಪರಿಸ್ಥಿತಿ ಮುಂದುವರಿದಿದ್ದು , ರಜಾ ಕಾಲದ ಪ್ರವಾಸಕ್ಕಾಗಿ ಇಲ್ಲಿಗೆ ಬಂದಿರುವ ಪ್ರವಾಸಿಗರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ನೇಪಾಳದಲ್ಲಿ ಸೃಷ್ಟಿಯಾದ ಹಠಾತ್ ಬೆಳವಣಿಗೆಯಿಂದಾಗಿ ಬಹುತೇಕ ಪ್ರವಾಸಿಗರು ತವರಿಗೆ ವಾಪಸ್ಸಾಗುವ ಪ್ರಯತ್ನದಲ್ಲಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...